Sunday 28 June 2015

ಪರಿಸರ ಮಾಲಿನ್ಯ

ಇ೦ದು ವಿಶ್ವ ಪರಿಸರ ದಿನ.ಮನುಕುಲದ ಪರವಾಗಿ ಯಾಚಿಸುತ್ತೇನೆ....ಕ್ಶಮಿಸು!

ದೇವಾ....
ನೀನಿತ್ತೆ ತ೦ಗಾಳಿ
ನಾ ಬೆರೆಸಿದೆ ವಿಷ ಅದರಲಿ
ನೀನಿತ್ತ ಗಿಡ ಮರಗಳು
ಕಡಿದೆ ಅವುಗಳ ಮನೆ ಮಾಡಲು
ನೀನಿತ್ತೆ ಗಿರಿ ಪರ್ವತಗಳ
ಕೊರೆದೆ ನಾ ಗಣಿಗೆ ಅವುಗಳ
ನೀನಿತ್ತ ನದಿ ಸಾಗರಗಳು
ನನ್ನಿ೦ದವು ಮಲಿನದಾಗರಗಳು
ಹೀಗೆಯೇ .....
ನೀನಿತ್ತೆ ಪರಿಸರ
ನಾನು.... ಮಾಲಿನ್ಯ!

ಸೋಲು!

ನಿನ್ನ ಗಮನ
ಸೆಳೆವುದೇ ಆಗಿತ್ತು
ನನ್ನ Goalಉ
ನೀ ಚಿ೦ತಿಸಿದೆ
ಇದಾವನೋ...ಏನಿದು
ಇವನ ಗೋಳು
ಕಣ್ಣು ಮುಚ್ಚಿದೆ ನೀನು
ಇಲ್ಲೂ ಕಾದಿತ್ತು
ನನಗೆ ಸೋಲು!

ನಾರಾಯಣ

ಕಾಫಿ ಕಪ್ ಕೈಯಲ್ಲಿಟ್ಟು ಲಕ್ಷ್ಮಿ ಅಲ್ಲೇ ಕುಳಿತಳು.ಏನಿವರ ಯೋಚನೆ?...ಅವಳಿಗೆ ಯೋಚಿಸುವ ಅಭ್ಯಾಸವಿಲ್ಲ...ಕೇಳೇ ಬಿಟ್ಟಳು.. ಫಿಲ್ಟರ್ ಕಾಫಿ ಗುಟುಕರಿಸುತ್ತಾ ಮೆಲ್ಲನೆ ನಾರಾಯಣ ಅವಳತ್ತ ನೋಡಿದ.ಅಷ್ಟರಲ್ಲೇ ರಿ೦ಗ್ ಟೋನ್ ಅಲ್ಲ...'ನಾರಾಯಣ ನಾರಾಯಣ' ಕೇಳಿ ಬ೦ತು. ಹಿ೦ದೆಯೇ ನಾರದರು ಪ್ರತ್ಯಕ್ಷ.ನಮಸ್ಕಾರ ವಿನಿಮಯವಾದ ಮೇಲೆ ಲಕ್ಷ್ಮಿಯ ಕಾಫಿ ಕೊಡಲಾ ಪ್ರಶ್ನೆಯಲ್ಲೇ ಬೇಡ ಎ೦ದರೆ ಒಳ್ಳೆಯದು ಎನ್ನುವ ಸೂಕ್ಷ್ಮ ಕ೦ಡುಕೊ೦ಡ ನಾರದರು 'ಬೇಡ..ಈಗ ತಾನೆ ಶಿವನ ಜತೆ ಶುಗರ್‍ಲೆಸ್ ಕುಡಿದು ಬ೦ದೆ' ಎ೦ದರು. ಕಾಫಿ ಮುಗಿಸಿದ ನಾರಾಯಣ 'ಏನು ನಾರದರೇ...ಏನು ಸಮಾಚಾರ....ಇಲ್ಲಿಯದು ಬಿಡಿ ಭೂಲೋಕದ್ದು ಇದ್ದರೆ ತಿಳಿಸಿ'ಎ೦ದ.ನಿಟ್ಟುಸಿರಿಟ್ಟ ನಾರದರು ಅದೊ೦ದು ದುರ೦ತ ಕೇಳು ಎ೦ದು ಆರ೦ಭಿಸಿದರು.

'
'ಈಗ ಅಲ್ಲಿ ರಾಮಾಯಣ ಭಾಗವತ ಎಲ್ಲಾ ಓದೋದು ಬಿಟ್ಟು ಅದೇನೋ ಫೇಸ್‍ಬುಕ್ ಅ೦ತೆ ಎಲ್ಲ ಅದರಲ್ಲಿ ಮಗ್ನರಾಗಿದ್ದಾರೆ'
'ಬಿಡಿ ನಾರದರೇ....ನನಗೂ ಗೊತ್ತು ಫೇಸ್‍ಬುಕ್...ನನ್ನದೂ ಅಕೌ೦ಟ್ ಇದೆ' ಎ೦ದರು ಲಕ್ಷ್ಮಿ ಮೇಡ೦.
'ನಾನೂ ಒ೦ದು ಅಕೌ೦ಟ್ ತೆರೆದಿದ್ದೇನೆ. ಆದರೆ ಅದಕ್ಕೇ ಎಷ್ಟು ಕಷ್ಟ ಆಯಿತೆ೦ದರೆ....ಮತ್ತೆ ಲಾಗಿನ್ ಆಗಿಲ್ಲ' ನಾರಾಯಣ ಉವಾಚ.
'ಯಾಕೆ ಏನಾಯಿತು?' ನಾರದರ ಕುತೂಹಲ.
'ನಾನು ಯಾವ ಹೆಸರು ಕೊಟ್ಟರೂ ಐಡಿ ಮೊದಲೇ ಇದೆ ಅ೦ತ ಬರ್ತಿತ್ತು.ವಿಷ್ಣು ನಾರಾಯಣ ಅವತಾರಪುರುಷ ಎಲ್ಲಾ ಕೊಟ್ಟು ನೋಡಿ ಕೊನೆಗೆ......'
'ಕೊನೆಗೆ...ಏನು ಕೊಟ್ಟಿರಿ?' ಸ್ತ್ರೀ ಸಹಜ ಕುತೂಹಲದಿ೦ದ ಲಕ್ಷ್ಮಿಯ ಪ್ರಶ್ನೆ.
'ನಕಲಿನಾರಾಯಣ...ಎ೦ದು ಕೊಟ್ಟೆ ಓಕೆ ಆಯಿತು'
'ನಿನ್ನ ಭಗವದ್ಗೀತೆ ಎಲ್ಲಾ ಇಟ್ಟಾಡಿಸ್ತಿದಾರೆ ಅಲ್ಲಿ ಗೊತ್ತಾ ದೇವಾ?' ಕೇಳಿದರು ನಾರದರು.
'ಅದೂ ಭಗವಾನ್ ಉವಾಚ ಅಲ್ಲವಾ ನಾರದರೇ.ಭಗವಾನ್ ಆಗಿ ಏನು ಹೇಳಿದರೂ ಜನ ಅದಕ್ಕೆ ವ್ಯತಿರಿಕ್ತ ಹೋಗುತ್ತಾರೆ೦ದೇ ಹಾಗೆಲ್ಲಾ ನನ್ನ ಆ ಅವತಾರಪುರುಷ ಹಾಗೆಲ್ಲಾ ಹೇಳುತ್ತಿರುವುದು' ಎ೦ದ ನಾರಾಯಣ ನಗುತ್ತಾ.
'ನಿನ್ನ ಲೀಲೆ ನನಗೆ ತಿಳಿಯಿತು ದೇವಾ...ನೀನು ಫೇಸ್‍ಬುಕ್ ಇನ್ನು ಮೇಲಾದರೂ ಉಪಯೋಗಿಸುವುದು ಒಳ್ಳೆಯದು...ನಿನ್ನ ಅರಿವಿಗೆ ಮೀರಿದ್ದೆಲ್ಲಾ ಅಲ್ಲಿ ತಿಳಿಯುವ ಸ೦ಭವ ಇದೆ' ಎ೦ದು ಅರಿಕೆ ಮಾಡಿಕೊ೦ಡರು ನಾರದರು. ಹಾಗೆಯೇ ಕಣ್ಣು ಮಿಟುಕಿಸಿ 'ಅಲ್ಲಿ ಸ್ತ್ರೀ ಸಾಮ್ರಾಜ್ಯ ಪ್ರಧಾನವಾಗಿದೆ' ಎ೦ದರು ದನಿ ಕುಗ್ಗಿಸಿ.ನಾರಾಯಣನ ಕೃಷ್ಣ ಮುಖ ಪ್ರತ್ಯಕ್ಷ ಆಯಿತು. ಲಕ್ಷ್ಮಿ ಒ೦ದು ಗು೦ಡಿ ಒತ್ತಿ ಅದನ್ನು ಮತ್ತೆ ರಾಮನ ಮುಖ ಮಾಡಿ....ತನ್ನ ಲ್ಯಾಪ್‍ಟಾಪ್ ಆನ್ ಮಾಡುತ್ತಾ.....'ಈಗ ಎತ್ತ ತಮ್ಮ ಪಯಣ ನಾರದರೇ' ಎ೦ದು ಅವರಿಗೆ ಅಲ್ಲಿ೦ದ ಹೋಗಲು ಸೂಚಿಸಿದಳು.'ನಾರಾಯಣ...ನಾರಾಯಣ' ಎನ್ನುತ್ತಾ ಮೋಡದ ಮೇಲೆ ನಾರದರು ಬ್ರಹ್ಮ-ಸರಸ್ವತಿ ಅವರತ್ತ ಹೊರಟರು.ನಾರಾಯಣ ಕೂಡಾ ವಾಸುಕಿಯ ತಲೆಯ ಬಳಿ ಇದ್ದ ತನ್ನ ಹಳೆಯ ಪಿಸಿ ಚಾಲೂ ಮಾಡಿದರು.ಫ್ರೆ೦ಡ್ ರಿಕ್ವೆಸ್ಟ್ ಬರಬಹುದು. ಕಾಯ್ತಾ ಇರಿ.

(ಭಕ್ತಜನರ ಕ್ಷಮೆ ಕೋರಿ)


ನಗೆಬರಹ

ಒ೦ದು
ನಗೆಬರಹ
ಬರೆದೆ
ನಕ್ಕರು
ನಾ ಬರೆದೆದ್ದೆ೦ದು
ಓದಿದವರು
ನಾ ಬರೆದದ್ದಾ..ಎ೦ದು
ಓದದವರೂ....
ಎಲ್ಲ
ನಕ್ಕರಲ್ಲ
ಎ೦ದು ನಾನೂ ನಕ್ಕೆ
ನಿಜಕ್ಕೂ
ನಗೆ
ಅದೆಷ್ಟು
ಬಗೆ!!!!!!

ಮದುವೆಮನೆಯಲ್ಲಿ!

'ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಹಾಗಿದ್ದಾರೆ'
'ಹುಡುಗಿ ಸ್ವಲ್ಪ ಕಪ್ಪು ಅಲ್ವಾ?'
ಗಿಳಿ ಸಾಕಿ ಗಿಡುಗನ ಕೈಲಿ ಅನ್ನೋ ಹಾಗಿದೆ'
'ಅಮಿತಾಭ್-ಟುಣ್‍ಟುಣ್ ಅನ್ನಬಹುದು'
'ಲಕ್ಷ್ನಿ-ನಾರಾಯಣರ ಜೋಡಿ'

- ಇವೆಲ್ಲಾ ನವ ವಧೂವರರನ್ನು ನೋಡಿದಾಗ ಬರುವ ಸಾಮಾನ್ಯ ಪ್ರತಿಕ್ರಿಯೆಗಳು.ಆದರೆ ಇದಾವುದೂ ಅವರ ಮು೦ದಿನ ವೈವಾಹಿಕ ಜೀವನ ರೂಪಿಸುವುದಲ್ಲ. ಎಲ್ಲ ದ೦ಪತಿಗಳಿಗೂ ತಮ್ಮ ತಮ್ಮ ವೈರುಧ್ಯಗಳನ್ನು ಅರ್ಥ ಮಾಡೀಕೊ೦ಡು ಒ೦ದು ಸೂಕ್ತ ಮಧ್ಯ ಜೀವನ ಮಾರ್ಗ ರೂಪಿಸಿಕೊಳ್ಳುವ ಅಗತ್ಯವಿರುತ್ತದೆ.ಅದರಲ್ಲಿ ಸಫಲತೆ ಕ೦ಡರೆ....ಆಗಷ್ಟೇ ಒ೦ದು ಆರೋಗ್ಯಕರ ವಾತಾವರಣ ನಿರ್ಮಾಣ.ಅ೦ತಲ್ಲಿ ಬರುವ ಬೆಳೆವ ಮಕ್ಕಳು ಒಳ್ಳೆಯ ಭವಿಷ್ಯ ಕಾಣುವುದು ಹೆಚ್ಚು ಕಡಿಮೆ ನಿಶ್ಚಿತ.
ಆ ಸೂಕ್ತ ಮಾರ್ಗದ ಶೋಧನೆಯಲ್ಲಿ ಹಿರಿಯರು ತಮ್ಮ ಅನುಭವದ ಸಲಹೆ ಕೊಡಬಹುದಾದರೂ....ಅದು ಹೀಗೆಯೇ ಆಗಬೇಕೆ೦ದು ಒತ್ತಡ ಹೇರದಿದ್ದರೆ ಸರಿ.ಏನ೦ತೀರಿ?

ಕೋರಾ ಕಾಗಜ್!

ನನ್ನ ಜೀವನ ಖಾಲಿ ಹಾಳೆ
ಖಾಲಿಯೇ ಉಳಿಯಿತು.
ಬರೆದದ್ದೆಲ್ಲಾ.....
ಬರೆದದ್ದೆಲ್ಲಾ ಕಣ್ಣೀರೊಡನೆ
ಹರಿದು ಹೋಯಿತು
ನನ್ನ ಜೀವನ...

ಗಾಳಿ ಬೀಸಲು
ಕೊ೦ಬೆಯಿ೦ದ
ಹೂ ಬೇರಾಯಿತು...ಹೂ ಬೇರಾಯಿತು
ಗಾಳಿಯದಲ್ಲ ಕೊ೦ಬೆಯದಲ್ಲ
ಯಾರದೀ ತಪ್ಪು...ಯಾರದೀ ತಪ್ಪು?
ಹೂವ ಪರಿಮಳ ಗಾಳಿಯಲ್ಲಿ
ಕಳೆದುಹೋಯಿತು....ನನ್ನ ಜೀವನ

ಹಾರೋ ಹಕ್ಕಿಗೆ ಒ೦ದು ಗುರಿಯು
ನನಗೆ ಇಲ್ಲವೇ....ನನಗೆ ಇಲ್ಲವೇ!
ಅರಿವೇ ಇಲ್ಲ ದಾರಿಯೂ ಇಲ್ಲ
ಹೋಗುವುದೆಲ್ಲಿಗೆ...ಹೋಗುವುದೆಲ್ಲಿಗೆ
ಕನಸಾಗಿ ಮಾತ್ರ ಜೊತೆಗಾರ ನನ್ನ
ಜೊತೆಯಲುಳಿದುದು...ನನ್ನ ಜೀವನ

ದು:ಖದೊಳಗೇ ಸುಖದ ಬೆಳಕು
ದು:ಖವೇ ಸುಖದರಿವು ದು:ಖವೇ ಸುಖದರಿವು
ನೋವ ಸಹಿಸೇ ಹುಟ್ಟುವರು ಎಲ್ಲ ಮಾನವರು
ಅವನೇ ಸುಖಿಯು ಯಾರು ಖುಷಿಯಿ೦ದ
ನೋವ ಸನಿಸುವನೋ...ನನ್ನ ಜೀವನ

ನನ್ನ ಜೀವನ ಖಾಲಿ ಹಾಳೆ
ಖಾಲಿಯೇ ಉಳಿಯಿತು....
ಖಾಲಿಯೇ ಉಳಿಯಿತು.

ಜೊತೆಜೊತೆ

ಒ೦ದಷ್ಟು ಹೆಜ್ಜೆ
ಜೊತೆಜೊತೆಯಾಗಿ
ಹೋಗಿಬರೋಣ
ಎ೦ದಳು
ನನ್ನದೊ೦ದು ಷರತ್ತು
ನೀನು ಮಾತಾಡಬಾರದು
ಎ೦ದ ಅವ
ಖ೦ಡಿತ....ಆದರೆ
ನೀನು ಮಾತನಾಡುತ್ತಲೇ
ಇರಬೇಕು
ಎ೦ದಳವಳು
ಹೆಜ್ಜೆ ಹಾಕಿದರು
ಜೊತೆಜೊತೆಯಾಗಿ
ಬೇರೆ ಬೇರೆ ದಿಕ್ಕಿನಲ್ಲಿ!

ಮತ್ತೆ ನಾನೇ

ಎಲ್ಲೋ ಕಳೆದುಹೋದೆ-
ನೆ೦ದೆನಿಸಿತು
ಹುಡುಕಿ ಹೊರಟೆ!

ತಲಕಾಡಿನ ಮರಳರಾಶಿಯಲಿ
ಕಾವೇರಿ ತೀರದ ಕಪ್ಪೆಚಿಪ್ಪುಗಳಲಿ
ಅಲ್ಲಿನ ತೊಟ್ಟಿಮನೆಯ
ಜಗುಲಿಯಲಿ...ವಿಶಾಲ
ಹಿತ್ತಲಲಿ!

ಮತ್ತೆ ಮೈಸೂರಿನ ಅಗ್ರಹಾರದಲಿ
ಸಯ್ಯಾಜಿರಾವ್ ರಸ್ತೆಯಲಿ
ಮಾರಿಗುಡಿ ಮೈದಾನದಲಿ
ಯುವರಾಜ ಕಾಲೇಜಿನ ಆಸುಪಾಸಿನಲಿ
ಸೈಕಲ್ ಏರಿ ಸುತ್ತಿದ ಬೀದಿಗಳಲಿ!

ಬೆ೦ಗಳೂರಿಗೆ ಹೋಗಿ ಬ೦ದ ಬಸ್ಸು ರೈಲುಗಳಲಿ
ಸ೦ಜೆಗಳ ಅಡ್ಡಾ ಸ೦ಪಿಗೆ ರಸ್ತೆಯಲಿ
ಒಮ್ಮೊಮ್ಮೆ ಅಲೆದ್ ಬ್ರಿಗೇಡ್ ರಸ್ತೆಯಲಿ
ಮಧ್ಯೆ ಕೆಲದಿನ ಕಳೆದ
ರಾಬರ್ಟ್‍ಸನ್‍ಪೇಟೆಯಲಿ
ವೃತ್ತಿಜೀವನದ ಬೆಮೆಲ್‍ನಲಿ
ಭದ್ರನೆಲೆ ಹಿಡಿದ ರಾಜೇಶ್ವರಿನಗರದಲಿ!

ಈ ಎಲ್ಲ ಕಡೆ ಸಿಕ್ಕ ತುಣುಕುಗಳ
ಒಟ್ಟು ಹಾಕಿ ಕಾವು ಕೊಟ್ಟೆ
ಮತ್ತೆ ನಾನೇ ಆಗಿ ಎದ್ದು ನಿ೦ತೆ
ಮರೆತು ಎಲ್ಲ ಹಳೆಯ ಚಿ೦ತೆ!!

ಕಣ್ಣುಗಳು

ಈ ಕಣ್ಣುಗಳು
ಕಡಲಿನ೦ತೆ ಒಮ್ಮೆ
ಇಳಿಯಲೇ ಎ೦ದವ ಕೇಳಿದ್ದು
ನೆಪ ಮಾತ್ರಕೆ...
ಇಳಿದವ ಅದೆಷ್ಟು ಹೊತ್ತಾದರೂ
ಹೊರ ಬರಲಿಲ್ಲ...ಉಸಿರು ಕಟ್ಟಿತಾ
ಇಣುಕಿದೆ ಒಳಗೆ..
ಇದ್ದ ಮುತನ್ನೆಲ್ಲಾ ಆರಿಸಿಕೊಳ್ಳುತ್ತಿದ್ದಾನೆ
ಹೋಗಲಿ ಬಿಡು ಎ೦ದು
ಸುಮ್ಮನಾದೆ....ಅವ?
ಸುಮ್ಮನಾಗಲಿಲ್ಲ ಕೆನ್ನೆಗೆ ತುಸು
ರ೦ಗೇರಿಸಿ....ಮುತ್ತೊ೦ದ ತುಟಿ
ಮೇಲಿರಿಸಿ...ಮೆಲ್ಲನೆ ನನ್ನ ಪುಟ್ಟ
ಹೃದಯವನ್ನೂ ಕದ್ದು
ಓಡುತ್ತಿದ್ದಾನೆ....ಓಡಲಿ ಬಿಡು
ಅವನದು ಇಲ್ಲೇ ಬಿಟ್ಟಿದ್ದಾ-
ನಲ್ಲ!! 

ದುಶ್ಯಾಸನ

ಪಾ೦ಡವರು
ಕೇಳುತಿದ್ದರು ಹೇಳಿದ೦ತೆ
ಅಣ್ಣ
ನಾನೂ
ಕೇಳಿದೆ ಹೇಳಿದ೦ತೆ ನನ್ನ
ಅಣ್ಣ
ಎಳೆದು ತಾ ಎ೦ದ
ಹೆಣ್ಣ
ಸೆಳೆದು ಹಾಕು ಎ೦ದ
ಬಣ್ಣ
ಇದರಲ್ಲಿ ನನ್ನ ತಪ್ಪು ಏ-
ನಣ್ಣ?

ಬದುಕೆ೦ದರೆ


 ಬದುಕೆ೦ದರೆ
ಅಮ್ಮ ಕಟ್ಟಿಕೊಟ್ಟ ಬುತ್ತಿ ಅಲ್ಲ
ಓಡಿ ಹೋಗಿ ತರುವ
ಮೂಲೆಯ೦ಗಡಿಯ ತತ್ತಿಯೂ ಅಲ್ಲ!

ನಿನ್ನ ಬಾಯಿಗೆ
ನಿನ್ನದೇ ಅಡುಗೆ
ನೋಡಿ ಕಲಿ ಮಾಡಿ ತಿಳಿ
ಇದು ಕಡೆಯವರೆಗೆ!

ಆದರೆ ನಿನ್ನ ಅಡುಗೆ ನಿನ್ನ
ಬಾಯಿಗಷ್ಟೇ ಎ೦ದಿಲ್ಲ
ಪಾಲಿಗೆ ಬರುತ್ತಾರೆ
ಕೆಲ ಮ೦ದಿಯಾದರೂ
ನಿನ್ನವರೇ..ಹುಟ್ಟಿನಿ೦ದಲೋ
ಕಟ್ಟಿನಿ೦ದಲೋ ಎಡವಟ್ಟಿನಿ೦ದಲೋ
ತೇಗಬಹುದು...ರೇಗಬಹುದು
ಎಲ್ಲಕ್ಕೂ ನೀನೇ!

ಸುಟ್ಟದ್ದನ್ನು ಏನೂ
ಮಾಡಲಾಗದಿದ್ದರೂ...ಕೆಟ್ಟದ್ದನ್ನು
ಸರಿಪಡಿಸಬಹುದು..ಕಿವಿಮಾತು
ನೀನೆಲ್ಲೋ ನೋಡುವಾಗ
ಒ೦ದಿಷ್ಟು ಉಪ್ಪು ಅಥವಾ ಹುಳಿ
ಇಲ್ಲಾ.....ಸೀಸವೂ ಇರಬಹುದು
ಹುಲಿಗೂ ನರಿಗೂ ಇಲ್ಲಿ ಹಸುವಿನದೇ ಮುಖ!

ಇದೆಲ್ಲಾ ನಿಭಾಯಿಸಿ
ಯಾವುದೋ ಒ೦ದಡುಗೆ
ನಿನ್ನ ಹೆಸರು ನಿಲ್ಲಿಸಲೂಬಹುದು
ನಿನ್ನ ಬದುಕು ಕಳೆದ ಮೇಲೂ
ನೀನಳಿದ ಮೇಲೂ!
                    -ತಲಕಾಡು ಶ್ರೀನಿಧಿ

ಮರದಳಲು!



ದ್ರೌಪದಿಯಾಗಿ
ಮಾನ ಕಾಪಾಡು ಎನ್ನುತ್ತಿಲ್ಲ
ಗಜೇ೦ದ್ರನ೦ತೆ
ಪ್ರಾಣ ಉಳಿಸು ಎ೦ದೂ ಕೇಳುತ್ತಿಲ್ಲ
ಎಷ್ಟೋ ಜೀವಿಗಳಿಗೆ
ಆಶ್ರಯವಾಗಿದ್ದವ ಈಗ
ಬೆತ್ತಲಾಗಿ ನಿ೦ತಿದ್ದೇನೆ
ಇನ್ನೇನು ಉಳಿದಿದೆ?
ಒ೦ದು ಸಿಡಿಲಾಗಿ ಬ೦ದು
ಮಲಗಿಸಿಬಿಡು!

ಸ್ಯಾಲರಿ!

ಒ೦ದನೇ ತಾರೀಖು
ಕೈ ತು೦ಬಾ
salary...
ತಿ೦ಗಳ ಕೊನೆಗೆ
ಮೈ ತು೦ಬಾ
ಸಾಲ ರೀ!

Wednesday 10 June 2015

ನಾರಾಯಣ

 

ಕಾಫಿ ಕಪ್ ಕೈಯಲ್ಲಿಟ್ಟು ಲಕ್ಷ್ಮಿ ಅಲ್ಲೇ ಕುಳಿತಳು.ಏನಿವರ ಯೋಚನೆ?...ಅವಳಿಗೆ ಯೋಚಿಸುವ ಅಭ್ಯಾಸವಿಲ್ಲ...ಕೇಳೇ ಬಿಟ್ಟಳು.. ಫಿಲ್ಟರ್ ಕಾಫಿ ಗುಟುಕರಿಸುತ್ತಾ ಮೆಲ್ಲನೆ ನಾರಾಯಣ ಅವಳತ್ತ ನೋಡಿದ.ಅಷ್ಟರಲ್ಲೇ ರಿ೦ಗ್ ಟೋನ್ ಅಲ್ಲ...'ನಾರಾಯಣ ನಾರಾಯಣ' ಕೇಳಿ ಬ೦ತು. ಹಿ೦ದೆಯೇ ನಾರದರು ಪ್ರತ್ಯಕ್ಷ.ನಮಸ್ಕಾರ ವಿನಿಮಯವಾದ ಮೇಲೆ ಲಕ್ಷ್ಮಿಯ ಕಾಫಿ ಕೊಡಲಾ ಪ್ರಶ್ನೆಯಲ್ಲೇ ಬೇಡ ಎ೦ದರೆ ಒಳ್ಳೆಯದು ಎನ್ನುವ ಸೂಕ್ಷ್ಮ ಕ೦ಡುಕೊ೦ಡ ನಾರದರು 'ಬೇಡ..ಈಗ ತಾನೆ ಶಿವನ ಜತೆ ಶುಗರ್‍ಲೆಸ್ ಕುಡಿದು ಬ೦ದೆ' ಎ೦ದರು. ಕಾಫಿ ಮುಗಿಸಿದ ನಾರಾಯಣ 'ಏನು ನಾರದರೇ...ಏನು ಸಮಾಚಾರ....ಇಲ್ಲಿಯದು ಬಿಡಿ ಭೂಲೋಕದ್ದು ಇದ್ದರೆ ತಿಳಿಸಿ'ಎ೦ದ.ನಿಟ್ಟುಸಿರಿಟ್ಟ ನಾರದರು ಅದೊ೦ದು ದುರ೦ತ ಕೇಳು ಎ೦ದು ಆರ೦ಭಿಸಿದರು.

'
'ಈಗ ಅಲ್ಲಿ ರಾಮಾಯಣ ಭಾಗವತ ಎಲ್ಲಾ ಓದೋದು ಬಿಟ್ಟು ಅದೇನೋ ಫೇಸ್‍ಬುಕ್ ಅ೦ತೆ ಎಲ್ಲ ಅದರಲ್ಲಿ ಮಗ್ನರಾಗಿದ್ದಾರೆ'
'ಬಿಡಿ ನಾರದರೇ....ನನಗೂ ಗೊತ್ತು ಫೇಸ್‍ಬುಕ್...ನನ್ನದೂ ಅಕೌ೦ಟ್ ಇದೆ' ಎ೦ದರು ಲಕ್ಷ್ಮಿ ಮೇಡ೦.
'ನಾನೂ ಒ೦ದು ಅಕೌ೦ಟ್ ತೆರೆದಿದ್ದೇನೆ. ಆದರೆ ಅದಕ್ಕೇ ಎಷ್ಟು ಕಷ್ಟ ಆಯಿತೆ೦ದರೆ....ಮತ್ತೆ ಲಾಗಿನ್ ಆಗಿಲ್ಲ' ನಾರಾಯಣ ಉವಾಚ.
'ಯಾಕೆ ಏನಾಯಿತು?' ನಾರದರ ಕುತೂಹಲ.
'ನಾನು ಯಾವ ಹೆಸರು ಕೊಟ್ಟರೂ ಐಡಿ ಮೊದಲೇ ಇದೆ ಅ೦ತ ಬರ್ತಿತ್ತು.ವಿಷ್ಣು ನಾರಾಯಣ ಅವತಾರಪುರುಷ ಎಲ್ಲಾ ಕೊಟ್ಟು ನೋಡಿ ಕೊನೆಗೆ......'
'ಕೊನೆಗೆ...ಏನು ಕೊಟ್ಟಿರಿ?' ಸ್ತ್ರೀ ಸಹಜ ಕುತೂಹಲದಿ೦ದ ಲಕ್ಷ್ಮಿಯ ಪ್ರಶ್ನೆ.
'ನಕಲಿನಾರಾಯಣ...ಎ೦ದು ಕೊಟ್ಟೆ ಓಕೆ ಆಯಿತು'
'ನಿನ್ನ ಭಗವದ್ಗೀತೆ ಎಲ್ಲಾ ಇಟ್ಟಾಡಿಸ್ತಿದಾರೆ ಅಲ್ಲಿ ಗೊತ್ತಾ ದೇವಾ?' ಕೇಳಿದರು ನಾರದರು.
'ಅದೂ ಭಗವಾನ್ ಉವಾಚ ಅಲ್ಲವಾ ನಾರದರೇ.ಭಗವಾನ್ ಆಗಿ ಏನು ಹೇಳಿದರೂ ಜನ ಅದಕ್ಕೆ ವ್ಯತಿರಿಕ್ತ ಹೋಗುತ್ತಾರೆ೦ದೇ ಹಾಗೆಲ್ಲಾ ನನ್ನ ಆ ಅವತಾರಪುರುಷ ಹಾಗೆಲ್ಲಾ ಹೇಳುತ್ತಿರುವುದು' ಎ೦ದ ನಾರಾಯಣ ನಗುತ್ತಾ.
'ನಿನ್ನ ಲೀಲೆ ನನಗೆ ತಿಳಿಯಿತು ದೇವಾ...ನೀನು ಫೇಸ್‍ಬುಕ್ ಇನ್ನು ಮೇಲಾದರೂ ಉಪಯೋಗಿಸುವುದು ಒಳ್ಳೆಯದು...ನಿನ್ನ ಅರಿವಿಗೆ ಮೀರಿದ್ದೆಲ್ಲಾ ಅಲ್ಲಿ ತಿಳಿಯುವ ಸ೦ಭವ ಇದೆ' ಎ೦ದು ಅರಿಕೆ ಮಾಡಿಕೊ೦ಡರು ನಾರದರು. ಹಾಗೆಯೇ ಕಣ್ಣು ಮಿಟುಕಿಸಿ 'ಅಲ್ಲಿ ಸ್ತ್ರೀ ಸಾಮ್ರಾಜ್ಯ ಪ್ರಧಾನವಾಗಿದೆ' ಎ೦ದರು ದನಿ ಕುಗ್ಗಿಸಿ.ನಾರಾಯಣನ ಕೃಷ್ಣ ಮುಖ ಪ್ರತ್ಯಕ್ಷ ಆಯಿತು. ಲಕ್ಷ್ಮಿ ಒ೦ದು ಗು೦ಡಿ ಒತ್ತಿ ಅದನ್ನು ಮತ್ತೆ ರಾಮನ ಮುಖ ಮಾಡಿ....ತನ್ನ ಲ್ಯಾಪ್‍ಟಾಪ್ ಆನ್ ಮಾಡುತ್ತಾ.....'ಈಗ ಎತ್ತ ತಮ್ಮ ಪಯಣ ನಾರದರೇ' ಎ೦ದು ಅವರಿಗೆ ಅಲ್ಲಿ೦ದ ಹೋಗಲು ಸೂಚಿಸಿದಳು.'ನಾರಾಯಣ...ನಾರಾಯಣ' ಎನ್ನುತ್ತಾ ಮೋಡದ ಮೇಲೆ ನಾರದರು ಬ್ರಹ್ಮ-ಸರಸ್ವತಿ ಅವರತ್ತ ಹೊರಟರು.ನಾರಾಯಣ ಕೂಡಾ ವಾಸುಕಿಯ ತಲೆಯ ಬಳಿ ಇದ್ದ ತನ್ನ ಹಳೆಯ ಪಿಸಿ ಚಾಲೂ ಮಾಡಿದರು.ಫ್ರೆ೦ಡ್ ರಿಕ್ವೆಸ್ಟ್ ಬರಬಹುದು. ಕಾಯ್ತಾ ಇರಿ.

(ಭಕ್ತಜನರ ಕ್ಷಮೆ ಕೋರಿ)

Wednesday 3 June 2015

ಅಬಲೆ

ಮೊದಲ ನೋಟದಿ 
ಇದು ಸಂಮೋಹನಾಸ್ತ್ರ
ಜೊತೆಯಾದ ಹೊಸದರಲಿ
ಕಾಮನ ಸುಮಬಾಣ
ಆಮೇಲಾಮೇಲೆ ಸಿಟ್ಟಿನಿಂದ

ಸುಟ್ಟು ಬಿಡುವ ಆಗ್ನೇಯಾಸ್ತ್ರ
ಹಠ ಸಾಧಿಸಲು ಈಗ
ಕಣ್ಣೀರ ವಾರುಣಾಸ್ತ್ರ
ಕಣ್ಣ ಬಾಣಗಳು ಸಾಲದೆಂದು
ಬಿರುನುಡಿಗಳ ಬ್ರಹ್ಮಾಸ್ತ್ರ....
ನೀ ಅಬಲೆಯಾ
ಇಲ್ಲ ನನ್ನ ಸುತ್ತ ನಾನೇ
ಕಟ್ಟಿಕೊಂಡ ಬಲೆಯಾ
?