Tuesday 2 October 2018

ನಾದತರಂಗ

ಯಮುನೆಯ ದಂಡೆಯಲಿ
ವಿರಹದಿ ಕುಳಿತಿರಲು
ದೂರದ ಆ ಬದಿಯಲಿ
ಕೊಳಲ ನಾದ ಕೇಳಿತು!
ಬಂದನೇ ಗೋಪಾಲ
ಕಾತುರದಿ ಎದ್ದು ಹೊರಟೆ
ಕಂಗಳು ಮುಚ್ಚಿದವು
ಕಾಲ್ಗಳು ಕಣ್ಣಾದವು
ನಾದದ ತರಂಗಗಳೇ
ದಾರಿಯಾದವು!
ನಡೆದೆ...ಇಲ್ಲ ಓಡಿದೆ
ಕ್ಷಣದಲ್ಲಿ ಅವನೆದುರು
ಮುಚ್ಚಿದ ಕಂಗಳು ತೆರೆದಿದ್ದವು
ಕಾಣಲು ಆ ಮೊಗದ ಬೆಳದಿಂಗಳು
ಸಮಯ ಕಳೆದಿದ್ದು ಹೇಗೋ
ತಿಳಿದವರು ಯಾರು?
ಮುರಳೀನಾದ ನಿಂತಿತೇಕೆ?
ಸ್ಮಿತವದನ ಹೊರಡುವನೇ?
ನದಿಯ ಆ ದಂಡೆಯ ಮತ್ತೆ
ತಲುಪುವುದೆಂತು?
ಬರುವಾಗ ಕರೆತಂದ ನಾದತರಂಗ
ಸ್ತಬ್ದವಾಗಿದೆಯಲ್ಲ....
ಶರಣು ಗೋವಿಂದ
ನೀನೇ ದಾರಿ ತೋರೋ
ಎಂದದ್ದು ಸಾಕಾಯ್ತು...
ಅವ ಆ ದಂಡೆಯಲಿ ನಿಂತು
ನಗುತ ಮುರಳಿಯನೂದಲು
ತನ್ನಷ್ಟಕೇ ಅತ್ತ ಚಲಿಸಿದವು
ಕಾಲ್ಗಳು ಮುಚ್ಚಿದ್ದವು ಕಂಗಳು!

No comments:

Post a Comment