Sunday 22 November 2015

ಮೊದಲ ಪಾಠಶಾಲೆ

ಮನೆಯೇ ಮೊದಲ ಪಾಠಶಾಲೆ
ತಾಯಿಯೇ ಅಲ್ವಾ ಮೊದಲ ಗುರು
ಬಯಸಿದುದ ಕೊಡುವ ಕಾಮಧೇನು
ನಾನೆಂದಿಗೂ ಅವಳ ಮುದ್ದು ಕರು
ಮನೆಯೇ ಮೊದಲ ಗಾನಮಂದಿರ
ಅಮ್ಮನ ಜೋಗುಳ ತೋರುತ ಚಂದಿರ
ಮನೆಯಲೇ ಇಟ್ಟದ್ದು ಮೊದಲ ಹೆಜ್ಜೆ
ಆಗಲೇ ಅಮ್ಮ ತಂದು ಕಟ್ಟಿದಳು ಗೆಜ್ಜೆ
ಮನೆಯೇ ಮೊದಲ ನಾಟ್ಯಶಾಲೆ
ಬೆಳೆಸಿದಳವಳು ಇದ ಕಲಿಸುತಲೆ
ಮನೆಯಲೇ ಇದ್ದುದು ಮೊದಲ ಗುಡಿ
ಸ್ತೋತ್ರವ ಹೇಳಿದ ತೊದಲ ನುಡಿ
ಮನೆಯೇ ಮೊದಲ ವ್ಯಾಯಾಮಶಾಲೆ
ಬಗ್ಗುತ ಬೀಳುತ ತಟ್ಟಿದ ಚಪ್ಪಾಳೆ
ಮನೆಯಲೇ ತೆಗೆದುದು ನನ್ನ ಮೊದಲ ಚಿತ್ರ
ಫೋನಿನಲ್ಲೇ ಕ್ಯಾಮರ..ಎಂಥ ವಿಚಿತ್ರ
ಮನೆಯ ಟೀವಿಯೇ ತೋರಿದೆ ನನಗೆ ವಿಶ್ವವೆಲ್ಲ
ನಾ ಕಂಡದೆಷ್ಟೋ ಪಾಪ ನೀವೇ ಕಂಡಿಲ್ಲ!

ಸೆಲ್ಫಿ

ಎಲ್ಲ ರಾಜಕೀಯ 
ಮುಖಂಡರೊಡನೆಯ ಸೆಲ್ಫಿಗಳು
ಮುರುಕು ಗೋಡೆಯಲಿ
ರಾರಾಜಿಸುತ್ತಿದ್ದವು
ಒಲೆ ಹಚ್ಚಲು ಇದ್ದ
ಸೀಮೆಣ್ಣೆ ಸುರಿದುಕೊಂಡು
ಸತ್ತ ಆ ರೈತನ
ಮೃತದೇಹದೊಂದಿಗೆ!

ಅಂತಿಮ ಆಕ್ರಮಣ


 
ಸೀಟಿ ಶಬ್ದ ಮಾಡಿತು
ಮಧ್ಯದ ಗೆರೆ ಕಣ್ಣಿಗೊತ್ತಿಕೊಂಡು
ಮುಂದೆ ನುಗ್ಗಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಕೊನೆಯ ಆಕ್ರಮಣ
ನನ್ನ ಈ ಆಕ್ರಮಣದ ಮೇಲೇ
ಈ ಪಂದ್ಯ ನಿಂತಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಎದುರಲ್ಲಿರುವವರ ಕಣ್ಣಲ್ಲಿ ಸವಾಲು
ಹಿಂದಿನಿಂದ ಒಕ್ಕೊರಲಿನ
ಪ್ರಚೋದನೆ 'ಕಮಾನ್'
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಈಗ ಕಣ್ಣು ಅವರುಗಳ ಕಾಲಿನ
ಕೈಗಳ ಮೇಲೆ ಕೇಂದ್ರೀಕೃತ
ಒಮ್ಮೆ ಒಬ್ಬರನ್ನಾದರೂ ಮುಟ್ಟೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಎದುರಿಗೆ ಇಷ್ಟೊಂದು
ಕಾಲುಗಳು..ತಲೆ ಎತ್ತಿದೆ ಅಲ್ಲಿ
ಎಷ್ಟೊಂದು ಜನ ಎಲ್ಲ ಔಟಾಗಿದ್ದವರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಗಾಂಧಿ,ನೆಹರು,ಭಗತ್,ಆಝಾದ್
ಅಣ್ಣಾವ್ರು,ಶಂಕರ್,ವಿಷ್ಣು ಕೂಡ
ಕಾರಂತ ಕುವೆಂಪು ಬೇಂದ್ರೆ ಅಜ್ಜಂದಿರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಲಕ್ಷಾಂತರ ಜನ ಎಲ್ಲ ಅಲ್ಲೆ
ದೂರು ಸಲ್ಲಿಸುವೆನೆಂದು ಅತ್ತ
ರೆಫರಿಯೆಡೆಗೆ ನೋಡಿದರೆ-ನಿರ್ಲಿಪ್ತ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇರಲಿ ನಾನು ವಿರೋಧ ಸೂಚಿಸುವೆ ನಂತರ
ನನ್ನ ಪಂದ್ಯಶ್ರೇಷ್ಟ ಪ್ರಶಸ್ತಿಗಳ ಹಿಂದಿರುಗಿಸಿ
ಮೊದಲು ಒಂದಾದರೂ ಅಂಕ ಬೇಕು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ವೌವ್! ಅಲ್ಲಿ ನೋಡು ಅಪ್ಪ ಅಮ್ಮ ಅಣ್ಣ
ಅಜ್ಜಿ ಅಜ್ಜಂದಿರು ಎಲ್ಲ ನನ್ನವರು
ಅಲ್ಲಿಂದಲೇ ಹುರಿದುಂಬಿಸುತ್ತಿದ್ದಾರೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಅಷ್ಟರಲ್ಲಿ ಈ ಗಟ್ಟಿ ಹಿಡಿತ
ಓ...ಕೇಡಿ ಏಡಿ ಹಿಡಿದಿರುವುದು
ಹಿಂದೆ ತಿರುಗಿದೆ ಗೆರೆ ಮುಟ್ಟಲು
"ಕಬಡ್ಡಿ...ಕಬ..ಡ್ಡಿ...ಕ..ಬ..ಡ್ಡಿ'
'ಕಮಾನ್','ನಿಧೀ','ಟಿಕ‍ಎಸ್'
'ಸರ್','ಗುರೂ','ರೀ','ಅಪ್ಪಾ'
ಎಷ್ಟೊಂದು ಜನರ ಬೆಂಬಲ ಮತ್ತೆ
"ಕ ಬ ಡ್ಡಿ ಕ ಬ ಡ್ಡಿ ಕ ಬ ಡ್ಡಿ'
ಸಿಕ್ಕಲಿಲ್ಲ ಇನ್ನೂ..ಇನ್ನೂ ಹಿಡಿದವು
ಏಡಿಗಳು ಎಲ್ಲೆಡೆ..ಕೊಸರಿದೆ ಆಗಲಿಲ್ಲ
ಬಿದ್ದೆ..ತಲೆ ಕೆಳಗೆ ಅಮ್ಮನ ಮಡಿಲು
"ಕ ..ಬ.. ಡ್ಡಿ...ಕ ...ಬ '
ಗೆರೆ ಸಿಕ್ಕಂತಾಯಿತು ಒಮ್ಮೆ
ರೆಫರಿಯತ್ತ ನೋಡಿದೆ ಆಸೆಯಿಂದ
ಅವನ ಕತ್ತಲ್ಲಿ ಸ್ಟೆತಾಸ್ಕೋಪ್ ಹೇಗೆ?
ತಲೆಯಾಡಿಸಿದ.......ಎಲ್ಲ ಸ್ತಬ್ಧ
ನಾನು...ಅವನು.....ಎಲ್ಲರೂ!

ಮನುಷ್ಯತ್ವ

ಇಲ್ಲಿ
ಬೀಳುವ ಹೆಣಗಳಿಗೆ
ಬ್ರಹ್ಮ ವಿಧಿ ಎಂಬೆಲ್ಲಾ 
ಲಿಖಿತಗಳಿಲ್ಲ
ಈಗ ತುಂಬಾ
ಮುಂದೆ ಹೋಗಿಯಾಗಿದೆ
ನರಜನ್ಮದ ಕಬಂಧ ಬಾಹುಗಳು
ಯಾರು
ಯಾರನ್ನಾದರೂ ಹೇಗೆಯಾದರೂ
ಎಲ್ಲಿಯಾದರೂ
ಕೊಚ್ಚಿ ಇಲ್ಲವಾಗಿಸಿಬಿಡುತ್ತೇವೆ
ಹೌದು
ಮೊದಲು ಆ ಮನುಷ್ಯತ್ವ
ಎಂಬುದನ್ನೇ
ಕೊಂದು ಹಾಕಿದ್ದೇವೆ
ಈಗೇನು
ಮನುಷ್ಯ ಮಾನವ ಎಂದೆಲ್ಲಾ
ಅನ್ನದಿದ್ದರೆ.....
who cares
ರಕ್ತ ಕೆಂಪಗೂ ಇದೆ
ತಂಪಾಗೂ ಇದೆ!

ಅಹವಾಲು!

ಪಟ್ಟಿಯಲ್ಲಿರುವ
ಸಾಲು ಸಾಲು
ಗೆಳೆಯರಲ್ಲಿ
ನನ್ನದೊಂದು ಪುಟ್ತ
ಅಹವಾಲು!
ದಿನಕ್ಕೊಮ್ಮೆ
ನೋಡಬಾರದೇಕೆ
ನನ್ನ ಈ wallಉ?
ಒಂದಾದರೂ ಸಿಗಬಹುದು
ಒಳ್ಳೆಯ ಸಾಲು
ಬೇಡವಾ? ಬಿಡಿ ನನಗೆ
ಅದು ಮಾಮೂಲು!

ಅಳಿಸುವುದು

ಅಳಿಸುವುದು ಸುಲಭ
ಗೆಳೆಯಾ
ಕೆನ್ನೆಮೇಲಿನ
ಕಂಬನಿಯ ಕಲೆ
ಅಳಿಸಲಾರೆ 
ಘಾಸಿಗೊಂಡ
ಹೃದಯದ ಕಲೆ!

ಲೇಖನಿ

ಅಂದು ಬರೆವವರ
ಲೇಖನಿಗಿತ್ತು ವಿಷ ಕಕ್ಕದೆ
ಸಮಾಜ ತಿದ್ದುವ 
ಶಕ್ತಿ 
ಇಂದು ಮಸಿ ಮುಖಕೆ
ಲೇಖನಿಯಲಿ ವಿಷ
ಹಿಂತಿರುಗಿಸುತ್ತಿದ್ದಾರೆ
ಪ್ರಶಸ್ತಿ!

ಗೋಡೆಗಳು

ಗೋಡೆಗಳು
ಎಷ್ಟು ವಿಧ ಎಷ್ಟು ಭಿನ್ನ!
ಒಂದಕ್ಕೊಂದು
ಅಂಟಿಕೊಂಡೂ ಒಂದಕ್ಕೊಂದು
ಸಂಭಂಧವಿಲ್ಲದ್ದು
ದಿನಕ್ಕೊಂದು ಪಟ
ಬದಲಿಸುತ್ತಾ ಅಥವಾ
ಅಕ್ಕರಗಳ ಮೆರವಣಿಗೆ ಮಾಡುತ್ತಾ
ಕೆಲವರ ಬೆನ್ನುತಟ್ಟುತ್ತಾ
ಮತ್ತೆ ಕೆಲವರ ಕಾಲೆಳೆಯುತ್ತಾ
ಖುಷಿಯ ಬಣ್ಣದೋಕುಳಿಯಂತೆಯೇ
ಕೆಸರೆರಚಾಟದ ಕೀಟಲೆಗಳು
ನಗಿಸುವ ಅಳಿಸುವ
ಅಳಿಸಲಾಗದೆ ಮನದಲ್ಲೇ ಉಳಿಸುವ
ನೂರು ಬರಹಗಳು
ಆಗೀಗ ತಡೆಗೋಡೆಗಳು
ಒಂದೊಮ್ಮೆ
ನಿರಾಳವಾಗಬೇಕೆಂದರೆ ಮತ್ತೆ
ಪ್ರೈಮರ್ ಹೊಡೆದು ಒಂದೆರಡು
ಪದರ ಬಿಳಿಯ ಬಣ್ಣ ಬಳಿದ
ಶುಭ್ರ ಸ್ವಚ್ಛ ಗೋಡೆ
ಬೇಕೆನಿಸುತ್ತಿದೆ!

ಕನ್ನಡಕ

ಮೊದಲ ಆ ದೊಡ್ಡ ಅಕ್ಷರ
ನಂತರದ ಎರಡು, ನಾಲ್ಕು ಅಕ್ಷರಗಳ ಸಾಲು
ಇಷ್ಟೇ ಓದಲಿಕ್ಕಾದದ್ದು
ಈಗ ಒಂದೆಡೆ ನನ್ನ ಗಲ್ಲವಿಟ್ಟು ಯಂತ್ರದ
ಇನ್ನೊಂದೆಡೆಯಿಂದ ಬೆಳಕಿನ ಕಿಡಿಯೊಂದು
ಆ ಕಿರಿಯ ವೈದ್ಯೆಯ ಕಡೆಯಿಂದ
ಮತ್ತೆ ಕಣ್ಣಿಗೆರಡು ತೊಟ್ಟು ತಂಪು ಹನಿಗಳು
ಆಗಸ..ಅಲ್ಲ ಸೂರಿಗೆ ಮುಖ ಮಾಡಿ
ಕಣ್ಣು ಮುಚ್ಚಿ ಅದೆಷ್ಟು ಹಾಡು ಗುನುಗುಟ್ಟಿದೆನೋ...
ಎರಡು ಬಾರಿ ಕಣ್ತೆರೆಸಿ ಮತ್ತೆ ಹನಿಸಿ ಹೋದವರು
ಬರುವುದೇ ಇಲ್ಲವೇ?....ಅಗೋ
ಇಂಪು ದನಿ ನನ್ನ ಹೆಸರು ಕರೆದಾಗ
ಕಾಯುತ್ತ ಕುಳಿತ ಉಳಿದವರತ್ತ ಒಂದು ಸಣ್ಣ ನಗೆ
ಮತ್ತೆ ಈ ಹಿರಿಯ ವೈದ್ಯರೂ ಅದೇ ಆಟಗಳಾಡಿ
ದೂರದೃಷ್ಟಿಗೆ ಒಂದು prescription
ಎದುರಿನ ಕನ್ನಡಕದಂಗಡಿ ..ಹೊರಗೇ ಕೆಲವರು
ಅಡ್ಡ ಹಾಕಿ
ಯಾವ ಬಣ್ಣ....ಹಸಿರಾ? ಕೇಸರಿಯಾ?
ಇಲ್ಲ ನೀಲಿ? ಮೈ ಝುಮ್.....
ಹಳದಿ? ...ಎಲ್ಲ ಬಣ್ಣಗಳಿಗೂ ಒಂದೊಂದು ಬಣ್ಣ
ಬಣ ನೆನಪಾಗುತ್ತಿದೆಯಲ್ಲ....
plain...ದೂರದ್ದು ಸ್ಪಷ್ಟ ಕಾಣಲು ಅಷ್ಟೇ ಎಂದೆ
ಎಲ್ಲರೂ ಮಾಯ....ಅಂಗಡಿಯವನು
ನಗುತ್ತಾ ಚೀಟಿಗೆ ಕೈ ಚಾಚಿದ.

ಖಾಲಿ ಹಾಳೆ!

ನಿನ್ನೆಯದು
ಇ೦ದಿಲ್ಲ ಇರದು
ಇ೦ದಿನದು
ನಾಳೆ....
ಬೇಕೋ ಬೇಡವೋ
ಪ್ರತಿದಿನದ
ಬೆಳಗು ಖಾಲಿ
ಹಾಳೆ!

ಮೂಡಿಲ್ಲ!

ದೂರಿದಳಾಕೆ
ಬೆಳಗಿನಿಂದ
ನೀ ಏನೂ 
ಮಾಡಿಲ್ಲ....
ಆಕಳಿಸುತ್ತಾ
ಅವನೆಂದ
ನನಗೆ ಇನ್ನೂ
ಮೂಡಿಲ್ಲ!

ಕನಸುಗಳು

ಬಾಲ್ಯದ
ನನಸಾಗಲೊಲ್ಲದ
ಅನ೦ತ ಕನಸುಗಳ...
ಹರಯದ
ಹತ್ತಾರು
ಹುಚ್ಚು ಕನಸುಗಳ...
ಕ೦ಡ ಮೇಲೆ
ಈಗ
ಅಲ್ಲೊ೦ದು ಇಲ್ಲೊ೦ದು
ಕಾಣುತಿರುವ
ಕನಸುಗಳು
ಜೀವ೦ತವೆನಿಸುತ್ತವೆ
ಬದುಕಿಗೆ ಹತ್ತಿರವೆನಿಸುತ್ತವೆ
ನನ್ನವಾಗಿ......ನನಗಾಗಿ....
ನನಸಾಗಬಲ್ಲವೆನಿಸುತ್ತದೆ!!!

ಒ೦ದು ಹನಿ

ಸುರಿವ
ಮಳೆಯಿ೦ದ
ಒ೦ದು ಹನಿ
ಹಿಡಿದು ತ೦ದೆ
ನೀನಾರು? ಎ೦ದೆ
ನಿನ್ನ ಅಕ್ಕ ಪಕ್ಕ ಹಿ೦ದೆ ಮು೦ದೆ
ಬ೦ದ ಇತರ ಹನಿಗಳಿಗೆ
ನೀನೇನು? ಎ೦ದೆ
ಬಿಕ್ಕಿತು...
ಅಲ್ಲ ನಕ್ಕಿತು ಮತ್ತೆ ಹೇಳಿತು...
ನಮ್ಮಲ್ಲಿ ನೀನು ನಾನು
ಜಾತಿ ಧರ್ಮ ಗ೦ಡು ಹೆಣ್ಣು
ಎ೦ದೆಲ್ಲಾ ಇಲ್ಲವಲ್ಲ
ನಾ ತಿಳಿದಿರುವುದಿಷ್ಟೇ
ನಾವೆಲ್ಲಾ ಒ೦ದೇ!

ಮಳೆಯೆ೦ದರೆ....

ಮಳೆಯೆ೦ದರೆ....
ಹೀಗೇ.....
ನಿಮ್ಮ ನೂರು
ಕಾರ್ಯಕ್ರಮಕ್ಕೆ
ಅಡ್ಡಿ ಪಡಿಸಬಹುದು
ಫಕ್ಕನೆ....ದೀಪಗಳೆಲ್ಲಾ
ಆರಿ ತಣ್ಣಗಾಗಬಹುದು
ಹೊರಗಿದ್ದರೆ
ಸುತ್ತಲಿನೆಲ್ಲರ ಮೇಲೆ
ಉರಿದು ಬೀಳುವ೦ತಾಗಬಹುದು

ಆದರೂ.......
ಕುಳಿತು ನೋಡುತ್ತಿದ್ದರೆ...
ಹೌದು
ಕುಳಿತು ನೋಡುತ್ತಿದ್ದರೆ...
ಈ ಭುವಿಯಾಗಸದ
ಮಿಲನ.....
ಮುದ
ಕೊಡದಿರದು!!!

ಫೇಸ್‍ಬುಕ್‍ನಲ್ಲಿ:


ಭಾವನೆಗಳಿಗೆ ಬಣ್ಣ ತು೦ಬಿ
ಬರೆಯುವರಿದ್ದಾರೆ.
ಚಿತ್ರಗಳಿಗೆ ಜೀವ ತು೦ಬುವ
ಗೆರೆ ಎಳೆಯುವವರಿದ್ದಾರೆ.
ತಿಳಿಹಾಸ್ಯದ ಮಾತುಗಳಿ೦ದ ನೋವ
ಮರೆಸುವರಿದ್ದಾರೆ.
ದಿನಕ್ಕೊ೦ದು ರೀತಿ ತಮ್ಮನ್ನೇ
ಮೆರೆಸುವರಿದ್ದಾರೆ.
ವಿಷಯವೇ ಇಲ್ಲದೇ ಸುಮ್ಮನೆ
ಕೊರೆಯುವವರಿದ್ದಾರೆ.
ಯಾರು ಏನಾದರೂ ತಿಳಿಯಲಿ
ಖರೆ ನುಡಿಯುವವರಿದ್ದಾರೆ.
ಓದಿದ ಬರಹಗಳಿಗೆ
ಮರೆಯದೇ ಸ್ಪ೦ದಿಸುವವರಿದ್ದಾರೆ.
ಓದಿದರೋ ಇಲ್ಲವೋ ತಿಳಿಯದ೦ತೆ
ಮರೆಯಲ್ಲಿರುವವರೂ ಇದ್ದಾರೆ.
ಯಾವುದೋ ಪ್ರೊಫೈ‍ಲ್‍ಗಳಲ್ಲಿ
ಬೇರೆ ಯಾರೋ ಇರುತ್ತಾರೆ.
ಸುಮ್ಮನೆ ಕಿರಿಕಿರಿ ಮಾಡುವ ಇವರು
ಮೋರೆ ಯಾರದೋ ತೋರುತ್ತಾರೆ.

ಆಶ್ವಾಸನೆ

ಚುನಾವಣೆ ಗೆಲ್ಲಲು
ಸಾಲದು ಬರಿಯ
ಆಶ್ವಾಸನೆ.........
ತೋರುತಿರಬೇಕು
ಹಂಚಲು ತಂದ
Cash ವಾಸನೆ!

ಕಾಮೇಚ

ನಮ್ಮ 
ಮದುವೆಯ ವಿಡಿಯೋ
ಮತ್ತೆ ನೋಡುತಿದ್ದೆ
ಗೆಳೆಯಾ.....
ಈಗಲೇ ನನಗೆ ತಿಳಿದದ್ದು
ಪುರೋಹಿತರು ಹೇಳಿದ್ದು
ನೀ ಹೇಳದ್ದು
ಕೆಲ ಪದಗಳು....
ಧರ್ಮೇಚ ಅರ್ಥೇಚ
ಹೇಳಿದ ನೀ
ಕಾಮೇಚ
ಹೇಳದಿದ್ದುದು!

ಎಡ-ಬಲ

ಗುಡಿಯ ಬಾಗಿಲಲ್ಲಿ
ನೂರಾರು ಪಾದರಕ್ಷೆಗಳು
ಎಡಕ್ಕೆ ಸವೆದವೂ ಇದೆ
ಬಲಕ್ಕೆ ಸವೆದವೂ.....
ಹೊಸದಲ್ಲದೆಯೂ
ಸಮನಾಗಿರುವುದು ಸಹ
ನೆಲದ ಮಣ್ಣಲ್ಲಿ ನೋಡು
ಹೆಜ್ಜೆ ಗುರುತುಗಳು
ಸ್ಪಷ್ಟ ಎಡ...ಸ್ಪಷ್ಟ ಬಲ
ಪೂರಾ ಕಾಣದಿದ್ದರೂ
ಕಣ್ಣು ಹೇಳುತ್ತದೆ ...ಇದು ಹೀಗೇ
ಆದರೂ ಅಲ್ಲೊಂದು ಇಲ್ಲೊಂದು
ದಿಟ್ಟ ಹೆಜ್ಜೆಗಳು....ಅವಕ್ಕೆ ಎಡಬಲ
ಇಲ್ಲ......
ಎಡಕ್ಕೂ ಬಲವಿದೆ
ಬಲವೂ ಎಡವಿದೆ
ಊಂಹೂಂ....ನೀ ಸ್ಪಷ್ಟವಿಲ್ಲ
ನೀನು ನೀನೇ....ನಾನು ನಾನೇ!

Monday 14 September 2015

ಉಯಿಲು

ಉಸಿರು ನಿಲ್ಲುವ ಸಮಯ ಅದು
ಮಾತು ಬರಿಯ ಸನ್ನೆ
ಉಯಿಲು ಬರೆದು ತಂದ ಅವ
ಒಂದರ ಮುಂದಷ್ಟು ಸೊನ್ನೆ
ಬೇಕಿತ್ತು ನನ್ನ ಸಹಿ ಅದಕೆ
ಅಥವಾ ಹೆಬ್ಬೆಟ್ಟು
ಒತ್ತಲು ಇರಲಿಲ್ಲ ತಾಕತ್ತು
ಒತ್ತಿದ ಅವನೇ ಇಟ್ಟು
ಕೆಲಸ ಮುಗಿಯಿತು
ಬಿಟ್ಟ ತಲೆ ತಕ್ಷಣ
ಪ್ರಾಣ ಹೋಯಿತು ಆಗಲೇ
ಅಪ್ಪನಾದನು ಹೆಣ
ಅವನಿಗೇ ಅರಿವಿಲ್ಲದೆ
ಬಿತ್ತು ಕಣ್ಣ ಹನಿಯೊಂದು
ಅಳಿಸಿತು ಉಯಿಲಿನಲ್ಲಿನ
ಸಂಖ್ಯೆಯಲ್ಲಿ ಆ ಮುಖ್ಯ '1'
ಈಗ ಉಳಿದದ್ದು ಅದರಲ್ಲಿ
ಬರಿಯ ಸೊನ್ನೆ
ಕಣ್ಣು ತುಂಬಿ ಬಂತವಗೆ
ನೋಡುತ ಅದನ್ನೇ!
(ಜಾಹಿರಾತೊಂದರ ಪ್ರೇರಣೆ)

Saturday 29 August 2015

ಸ್ಪರ್ಧೆ

ಮೊನ್ನೆ ಇತ್ತು
ನಮ್ಮ ಬಡಾವಣೆಯಲ್ಲಿ
ಗೀತೆ ಹಾಡುವ
ಸ್ಪರ್ಧೆ
ನನಗೇ ಬಂತು
ಮೊದಲ ಬಹುಮಾನ
ಹಾಡೋಕೆ ಯಾರೂ
ಬರದೆ!

ಈರುಳ್ಳಿ

ಎದುರಂಗಡಿ ಶೆಟ್ರ
ಮಗಳು ಬಲು ಕಿಲಾಡಿ
ಕುಳ್ಳಿ
ದ್ರಾಕ್ಷಿ ಗೋಡಂಬಿ
ಮುಂದಿಟ್ಟು ಹಿಂದೆ ಸರಿಸಿದ್ದಾಳೆ
ಈರುಳ್ಳಿ!

ಚುನಾವಣೆ

ನೋಟಿಗೊಂದು
ವೋಟು ಕೊಡುವ
ಮತದಾರ
ಇರುವವರೆಗೆ...
ಇರುತ್ತಾನೆ
ವೋಟಿಗೊಂದು
ನೋಟು ಕೊಡುವ
ಉಮೇದುವಾರ!!

ಕುಡುಕವಾಣಿ:


ಕುಡಿದು ಟೈಟಾಗಿದ್ದಾಗ
ಮಾತ್ರ ನಾನೊಬ್ಬ ಸಂತ
ಅದಕ್ಕೇ ದಿನಾ ಕುಡಿಯುತ್ತೇನೆ
ಹಾಗೇ ಬದುಕಬೇಕು ಅಂತ!

ನಿನ್ನೆ ಇಂದು ನಾಳೆ

ನಿನ್ನೆ 
ಪ್ರೀತಿಸಿದ್ದು
ನಿನ್ನೆ
ಇಂದು
ಏಕೋ
ಪ್ರಿಯವಾಗಿದ್ದು
ಇಂದು
ನಾಳೆ?????????

ರಂಡೆ!

ಗುಂಡ ಬೆಳಿಗ್ಯೆ ಕಾಫಿ ಕುಡಿಯುತ್ತಾ ಕುಳಿತಿದ್ದ.
ಮಗಳ ಗೆಳತಿ ಬಂದವಳೇ ' ಅಂಕಲ್, ಪೂಜಾ ಇದ್ದಾಳಾ?' ಎಂದು ಕೇಳಿದಳು. 'ಇಲ್ಲಮ್ಮ. ಆರು ಘಂಟೆಗೇ ಓಡೋಕೆ ಹೋದಳು ರಂಡೆ!' ಎನ್ನಬೇಕೇ ಗುಂಡ. 
ಅವಳು ಸುಮ್ಮನಿರಲಿಲ್ಲ. 'ಯಾಕೆ ಅಂಕಲ್ ಓಡೋಕೆ ಹೋಗಿದ್ರೆ ಬೈತೀರಾ' ಪ್ರಶ್ನಿಸಿದಳು 
'ಅಯ್ಯೋ ಹುಡುಗೀ ಹಾಗಲ್ಲ....ನಾ ಹೇಳಿದ್ದು RUN DAY ಅಂತ' ಎಂದ ಗಡಿಬಿಡಿಯಿಂದ.

ಉತ್ತರಗಳು

ಜೀವನದಲ್ಲಿ ಹಾಗೇ...
ಒಂದೇ ಪ್ರಶ್ನೆಗೆ
ತರಹಾವಾರು ಉತ್ತರಗಳು
ಎಲ್ಲವೂ ಸರಿಯೇ ಅವರವರಿಗೆ
ಸಮಯಕ್ಕೆ ತಕ್ಕಂತೆ
ವ್ಯಕ್ತಿಗಳಿಗೆ ತಕ್ಕಂತೆ!

ಯಮ

ಯಾರೋ ತಿವಿದಂತಾಯಿತು. ಅರ್ಧ ಕಣ್ತೆರೆದು ನೋಡಿದೆ. ಕೆಂಪು ಕಣ್ಣು ಕೋಣ. ಸ್ವಲ್ಪ ಮೇಲೆ ನೋಡಿದರೆ......ಅದೇ ಕೆಂಪುಕಣ್ಣಿನ ಯಮ ಹಲ್ಲು ಕಿರಿಯುತ್ತಿದ್ದ. ಆಕಳಿಸುತ್ತಾ ಕೇಳಿದೆ 'ಇಲ್ಲೇನು ಕೆಲಸ?'. ಗಲ್ಲು ಎಂದು ಕೇಳ್ಪಟ್ಟೆ ಅದಕ್ಕೇ ಬಂದೆ ಎಂದ. ಗಾಬರಿಯಿಂದ 'ನನಗಾ?' ಎಂದೆ.ನಕ್ಕು ಹಿಂದೆ ನೋಡಿದ. ಅವನ ಶಿಷ್ಯ ಉರುಲು ಸರಿ ಮಾಡುತ್ತಿದ್ದ. ಅದೇನೋ ನೋಡಬಾರದ್ದು ಹುಡುಕುತ್ತಿದ್ದೆಯಂತೆ ಕಂಪ್ಯೂಟರ್ನಲ್ಲಿ ಅಂದ. ಈಗ ಜ್ಞಾನೋದಯ ಆಯಿತು. ಯೋ.....ಅದು ಗಲ್ಲಲ್ಲ....ಗೂಗಲ್ ಅಂದೆ. 'ಅಂದ್ರೆ? ' ಪ್ರಶ್ನಿಸಿದ. ಏನಿಲ್ಲ ನೀವೆಲ್ಲ ಸ್ವರ್ಗದಲ್ಲಿ ದಿನಾ ನೋಡೋದೇ ಅಂದೆ. ನಾವು ದೇವತೆಗಳು ಏನಾದರೂ ಮಾಡ್ತೀವಿ ನೋಡ್ತೀವಿ ಎಂದ ಮೀಸೆ ತಿರುವುತ್ತಾ. ನಮ್ಮಲ್ಲೂ ಎಷ್ಟೋ ರಾಜಕಾರಣಿಗಳು ಸಭೆಯಲ್ಲೇ ನೋಡುತ್ತಾರೆ...ಕೆಲಸದ ಸಮಯದಲ್ಲಿ. ನಾನು ಮನೆಯಲ್ಲಿ ನೋಡಿದರೆ ಏನು ತಪ್ಪು ಯಮಣ್ಣ ಅಂದೆ. ತಪ್ಪಿಲ್ಲ ಬಿಡು ಎಂದ. ಸರಿ ಮತ್ತೆ ಹೊರಡು ಎಂದೆ. ನಿನ್ನನ್ನು ಇಲ್ಲಿ ನೋಡಿದರೆ ಅಂತ್ಯಕ್ರಿಯೆ ಗೆ ರೆಡಿ ಮಾಡಿಬಿಟ್ಟಾರು ಯಾರಾದರೂ .....ರೈಟ್ ಹೇಳು ಎಂದೆ. ಬರಿ ಕೈಲಿ ಹೋಗೋ ಹಾಗಿಲ್ಲ ಎಂದ. ಅದಕ್ಕೆ ನಾನೇನು ಮಾಡಲಿ ಅಂದೆ. ಆ ಕಂಪ್ಯೂಟರ್ ಎತ್ತಿಕೊಂಡು ಹೋಗ್ತೀನಿ ಅಂದ. ಸರಿ ತಗೊಂಡು ಸಾಯಿ ಎಂದೆ. ದನಿ ತಗ್ಗಿಸಿ ' ಅದೇನೋ ನೋಡ್ತಿದ್ಯಲ್ಲ ಅದು ಹೇಗೆ ಅಂತ ಸ್ವಲ್ಪ ಹೇಳಿಬಿಡು ಹೋಗ್ತೀನಿ ' ಎಂದ ನಗುತ್ತಾ. ಸರಿ ಅಂತ ಎದ್ದು ಕುಳಿತೆ. ಬೆಳಕು ಹರಿದಿತ್ತು.

ಆಗಸದ ಏರ್ಪಾಡು

ಭಾರಿ ಕುತೂಹಲ
ಈ ಆಗಸದ ಏರ್ಪಾಡು
ಹಗಲಿನ ನಡವಳಿಕೆಗೆ
ಇರುಳಲಿ ಮಾರ್ಪಾಡು!
ಬೆಳಿಗ್ಗೆ ಪೂರಾ ಇಹುದು
ಸೂರ್ಯನ ಸರ್ವಾಧಿಕಾರ
ಇರುಳಾದರೆ ತಾರೆಗಳೊಡನೆ
ಚಂದಿರನ ಸ್ವೇಚ್ಛಾ ಚಾರ!
ಸೂರ್ಯ ಉರಿಯುವುದು
ಚಂದ್ರನ ಜನಪ್ರಿಯತೆ ಕಂಡೇ?
ಚಂದ್ರನ ತಂಪು ನೀಡುವ ಪರಿ
ಸೂರ್ಯನ ಬೆಳಕನುಂಡೇ!
ರವಿ ಸುತ್ತುವ ಇಳೆಯ ಸುತ್ತುವ
ಚಂದಿರನೆನ್ನುವುದು ವಿಜ್ಞಾನ
ಇಬ್ಬರೂ ನಮಗಾಗಿಯೇ ಬಂದು
ಹೋಗುವರೆನ್ನುವುದು ನನ್ನ ಜ್ಞಾನ!

ಮತ್ತೆ ಮುತ್ತು

ಮುತ್ತಿನ
ವ್ಯವಹಾರದ
ಲೆಕ್ಕಾಚಾರ
ಬಲು ಕಷ್ಟ....
ಕೊಟ್ಟವರು
ಪಡೆದವರು
ಇಬ್ಬರಿಗೂ
ಇಲ್ಲ ನಷ್ಟ!

ತೆರೆ

'ತೆರೆ'
ಎಂದೊಡನೆ
ತೆರೆಯ ಹಿಂದೆ
ಮರೆಯಾದವರು
ತೆರೆಯಲು ಗೋಗರೆದರೂ
ಮರೆತೂ
ತೆರೆಯಾಚೆ
ಬಾರದಿರುವುದು
ದುರಂತ!

ಸರಳಾ!

ನಿನ್ನೆಡೆಗೆ ನನ್ನ
ಸೆಳೆದದ್ದು
ಆ ಕಾಡುತಿರುವ
ಮುಂಗುರುಳಾ?
ಅದರೊಡನೆ ಆಡುತಿರುವ
ಆ ತೋರ ಬೆರಳಾ?
ಮೆಲ್ಲನೆ ಗುನುಗುತಿರುವ
ಇನಿದನಿಯ ಕೊರಳಾ?
ನನಗೆ ತಿಳಿಯುತ್ತಿಲ್ಲ
ನೀನೇ ಹೇಳಿಬಿಡು ಸರಳಾ!

ಅಭಿಷೇಕ

ನಾನು ನಾಸ್ತಿಕನಲ್ಲ. ಆದರೆ ದೇವರು ದೇವಸ್ಥಾನದ ಸುತ್ತಾಟದಲ್ಲಿ ತೊಡಗಿದವನು ಅಲ್ಲ.ಅಕಸ್ಮಾತ್ ಹೋದಾಗ ಕೈ ಮುಗಿಯದೆ ಓಡಿ ಬರುವ ಪ್ರವೃತ್ತಿಯವನೂ ಅಲ್ಲ.ಏನೆಂದರೆ ಈ ಅಭಿಷೇಕದ ಹೆಸರಿನಲ್ಲಿ ಹಾಲು ಮೊಸರು ಜೇನುತುಪ್ಪ ಎಲ್ಲ ಪೋಲಾಗುವುದು ಕಂಡಾಗ ಸಂಕಟ ಆಗುವುದು ನಿಜ.ಮಾಡಲೇಬೇಕೆಂದಿದ್ದರೆ ಒಂದು ಪುಟ್ಟ ಉತ್ಸವಮೂರ್ತಿ ಇಟ್ಟು ಆ ಆಸೆ ತೀರಿಸಿಕೊಳ್ಳಬಹುದಲ್ಲವೇ! ದೊಡ್ಡ ವಿಗ್ರಹಗಳು ....ಅದರಲ್ಲೂ ಎಲ್ಲ ಬಿಟ್ಟೆನೆಂದು ನಿಂತ ಭವ್ಯ ಗೊಮ್ಮಟ........ಅಭಿಷೇಕ ಅವಶ್ಯವಾ?

ಅರ್ಜುನನಲ್ಲ.

ಹೂಂ....ಕಾಣುತ್ತಿದೆ
ಮೇಲೆ ಹಸಿರೆಲೆಗಳ ನಡುವೆ
ಆ ಹಸಿರು ಗಿಣಿ ...ಸುಂದರ ಗಿಣಿ
ಅದರ ಕಣ್ಣು?.....ಹುಂ...ಈಗ
ಕಾಣುತ್ತಿದೆ ಅದರ ಕಣ್ಣು
ಕಣ್ಣೊಳಗೆ.....ಇನ್ನೂ ಒಳಗೆ
ನಿಷ್ಕಪಟ ಹೃದಯ....
ಒಲವ ಸೆಲೆ
ಹಾಂ? ಬಾಣವಾ?
ಕಣ್ಣಿಗೇ ಗುರಿ?
ಇಲ್ಲ....ಆಗದು
ಒಲ್ಲೆ
ನಾ ಅರ್ಜುನನಲ್ಲ.....
ಆಗುವುದೂ ಇಲ್ಲ!

ಒಡನಾಟ

ಎರಡು ದಾರಿಗಳು
ಸೇರಿದಲ್ಲಿ ಜೊತೆಯಾದೆವು
ಒಂದು 'ಹಲೋ' ಹೇಳಿ
ಹೆಜ್ಜೆ ಹಾಕುತ್ತಾ ಹಾಕುತ್ತಾ
ಕೈಗಳು ಹೆಣೆದುಕೊಂಡಿದ್ದವು
ಮನಗಳಂತೆಯೇ.....
ಒಂದು ಎರಡು ಮೂರು...ಏಳು
ದಾಟಿ ಸಪ್ತಪದಿಯ ಮಿತಿಯ
ನಡೆಯುತ್ತಲೇ ಇದ್ದೆವು ಎಚ್ಚರ ತಪ್ಪಿ
ರಸ್ತೆ ಕವಲೊಡೆದುದರ ಅರಿವೇ ಇಲ್ಲದೆ
ಯಾಕೆ ಬೇಕು? ನಡೆವುದು ಒಟ್ಟಿಗೆ ತಾನೇ
ನನಗೆ ಕಾಲುನೋವೆಂದಾಗ ನೀ ಕುಳಿತು
ಕಾಲನೊತ್ತಿದೆ....ನೀ ಬಸವಳಿದಾಗ
ನಾ ಗಾಳಿ ಬೀಸಿದೆ ....ಇಬ್ಬರೂ
ದಣಿದಾಗ ಕಣ್ಣಲಿ ಕಣ್ಣಿಟ್ಟು ಬಾಯಿಬಿಡದೆ
ಡ್ಯೂಯೆಟ್ ಹಾಡಿ...ಹಾದಿ ಸವೆಸುತ್ತಾ
ಹಿಂದೆ ತಿರುಗಿ ನೋಡುವ ಅಗತ್ಯವಿಲ್ಲದೆ
ಮುಂದೆ ತುಂಬ ದೂರಕೆ ನೋಡಲಾಗದೆ
ಈಗ ಇಡುತ್ತಿರುವ ಈ ಹೆಜ್ಜೆಗಳು ಬಯಸುವುದು
ಒಂದನೊಂದು ಅಗಲದ ಒಡನಾಟ....ಅಷ್ಟೇ!

Friday 24 July 2015

ಬುದ್ಧಿವಂತ

'ನೀ ತುಂಬ ದಡ್ಡಿ ಕಣೇ' ಗಂಡನೆಂದ ಕೋಪದಿಂದ.
'ಅದು ನಿಮ್ಮನ್ನ ಮದುವೆ ಆಗಿದ್ದರಲ್ಲೇ ಗೊತ್ತಾಗುತ್ತಲ್ಲ' ನಗುತ್ತಲೇ ಹೇಳಿದಳು.
'ನಾ ಭಾರಿ ಬುದ್ಧಿವಂತ ಬಿಡು' ಎಂದ ಈಗ ಮುಖ ಅರಳಿಸುತ್ತಾ.
'ಅದೂ ನನ್ನನ್ನು ಮದುವೆ ಆಗಿದ್ದರಲ್ಲೇ ತಿಳಿಯುತ್ತಲ್ಲ!!!!' ಎಂದಳು ಹಾಗೇ ನಗುತ್ತಾ.
ಅವ ಸದ್ದಿಲ್ಲದೆ ಜಾಗ ಖಾಲಿ ಮಾಡಿದ.

ಸೂರ್ಯೋದಯದ ಸೊಬಗು



ಒಂದು ತಣ್ಣನೆಯ ರವಿವಾರದ ನಸುಕು
ಸುತ್ತ ಎಲ್ಲವೂ ಮುಸುಕು ಮುಸುಕು
ಸೂರ್ಯೋದಯದ ಸೊಬಗಿನ ಗುಂಗಿನಲಿ
ಓಡಿ ಸೇರಿದೆ ನೋಡಲು ಲಾಲ್‍ಬಾಗಿನಲಿ!

ತೀವ್ರ ಗತಿಯಲಿ ಓಡುತ್ತಿರುವವರ
ಮಂದಗತಿಯಲಿ ಓಡಾಡುತ್ತಿರುವವರ
ಸುಮ್ಮನೇ ಕುಳಿತು ನೋಡುತ್ತಿರುವವರ
ದಾಟಿ ಸೇರಿದೆ ಬಂಡೆ ಮೇಲಿನ ಎತ್ತರದ ಗೋಪುರ!

ಆಗಸ ಇನ್ನೂ ನೀಲಿಯಾಗೇ ಇತ್ತು
ಅಲ್ಲೊಂದು ಇಲ್ಲೊಂದು ಬಿಳಿ ಮೋಡ ತೇಲುತ್ತಿತ್ತು
ಮರೆತು ಇಹದ ಎಲ್ಲ ಚಿಂತೆ
ಮೂಡಲ ದಿಕ್ಕಿನಲಿ ನೋಡುತ್ತ ನಿಂತೆ!

ಅಗೋ ಬಾನಿನಲಿ ಒಂದು ಬಣ್ಣದೋಕುಳಿ
ಮೈ ಮನಗಳಲಿ ಕಾತರದ ಕಚಗುಳಿ
ಹೊರಗಿನ ಚಿಲಿಪಿಲಿಗಳಿಗೆ ಕಿವುಡಾದೆ
ಇತರರ ಇರುವಿಗೆ ಕುರುಡಾದೆ!

ಮೂಡಿತಾಗ ದೂರದಲಿ ಕಿತ್ತಳೆಯ ಚೆಂಡು
ನಾಚಿ ಕೆಂಪಾಗುತ್ತಾ ಈ ಇಳೆಯ ಕಂಡು
ಕಣ್ಣಲಿ ತುಂಬಿಕೊಂಡೆ ಈ ಸೂರ್ಯೋದಯವ
ಕ್ಷಣದಲಿ ಧನ್ಯನೆನಿಸಿದ ಸೂರ್ಯನ ದಯವ!!

ಅಹಲ್ಯೆ

ಕಲ್ಲಾಗಿದ್ದುದು
ಅಹಲ್ಯೆಯಷ್ಟೇ ಅಲ್ಲ
ಶಪಿಸಿದ ಹೃದಯ ಕೂಡ!

ನೋವಹನಿ

PENಯಿಂದ ಮೂಡಿ 
PUNಯಿಂದ ಕೂಡಿ 
Lಅರ ಮೆಚ್ಚುಗೆ ಪಡೆದ
ಅವನ ನಗೆ-
ಹನಿಗಳು
ಮರೆಸಿದವು
ನೋವ ನುಂಗಿದ್ದ ಅವನ
ಹೃದಯ ಸುರಿಸಿದ ಕಣ್ಣ
ಹನಿಗಳ!

Saturday 18 July 2015

ತುಪ್ಪ

ಗುಂಡ ಊಟಕ್ಕೆ ಕೂತ.ಹೆ೦ಡತಿ ಬಿಸಿಬಿಸಿ ಅನ್ನ ಬಡಿಸಿ ಒಳಹೋದಳು.
'ತುಪ್ಪ' ಅ೦ದ ಗು೦ಡ ಆಸೆಯಿಂದ.
"ಆಂ....' ಗುಡುಗಿದಳು ಒಳಗಿಂದ.
'ಉಪ್ಪು ಅಂದೆ' ಸ್ವಲ್ಪ ಮೆಲ್ಲನೆ ಹೇಳಿದ.
'ಏನ೦ದಿರಿ?...' ಎನ್ನುತ್ತಾ ಹೊರಬಂದಳು.
'ಉಫ್ ಅಂದೆ ಕಣೇ ...ಬಿಸಿ' ಹಲ್ಲು ಕಿರಿದ!
*ಹಿ೦ದೆ ಓದಿದ್ದು*

ಪಟ್ಟಣದಲ್ಲಿ....

ನಗ್ತೀರಾಪ್ಲೀಸ್!

ಗು೦ಡ ಮೊದಮೊದಲು ಪಟ್ಟಣಕ್ಕೆ ಬಂದಿದ್ದ.ತಿಂಡಿ ತಿಂದು ಹಾಗೇ ಅಡ್ಡಾಡಿ ಬರುತ್ತೇನಂದು ಹೊರಗೆ ಹೊರಟ. ಅವನ ಗೆಳೆಯ ಅವನನ್ನು ಎಚ್ಚರಿಸುವುದು ಮರೆಯಲಿಲ್ಲ. ಪಟ್ಟಣದಲ್ಲಿ ಮೋಸ ಮಾಡುವವರು ಹೆಚ್ಚು....ಹುಷಾರಾಗಿರು ಎಂದ.ನನಗೂ ಗೊತ್ತು ಬಿಡು ಎಂದು ಹೋದವನು ಹಿಂತಿರುಗಿದ್ದು ಮೂರು ಗ೦ಟೆ ಕಳೆದು.ಬಂದವನೇ ಗೆಳೆಯನಿಗೆ ಹೇಳಿದ 'ನಿಮ್ಮ ಪಟ್ಟಣದವರು ಮೂರ್ಖರು...ಏಮಾರಿಸಿ ಬಂದೆ'.ಗೆಳೆಯನಿಗೆ ಆಶ್ಚರ್ಯ.ಏನಾಯಿತು ಹೇಳು ಎಂದ ಕುತೂಹಲ ತಡೆಯಲಾಗದೆ.
ಗುಂಡ ಹೇಳಿದ 'ಇಲ್ಲಿಂದ ಹೋದೆನಾ....ಒಂದು ಮೈಲು ದೂರ ದಾಟಿದಾಗ ಅಲ್ಲೊಂದು ದೊಡ್ಡ ಕಟ್ಟಡ ಕಾಣಿಸಿತು. ಹತ್ತಿರ ಹೋಗಿ ತಲೆ ಎತ್ತಿ ನೋಡಿದೆ.ಬಲು ದೊಡ್ಡದಿತ್ತು. ಅಷ್ಟರಲ್ಲಿ ಒಬ್ಬ ಬಂದು ಬೆನ್ನ ಮೇಲೆ ಕೈ ಹಾಕಿದ'.
ಗೆಳೆಯ ಕೇಳಿದ 'ಯಾರು ...ಅವ ನಿನ್ನ ಹಳ್ಳಿಯ ಗೆಳೆಯನಾ?'.
ಗುಂಡ ಮುಂದುವರೆಸಿದ 'ಇಲ್ಲ ನನಗೆ ಪರಿಚಯದವನಲ್ಲ.ಏನು ಎ೦ದು ಕೇಳಿದೆ. ಏನು ನೋಡ್ತಿದೀಯಾ ಎಂದ. ಇದೇ ...ಕಟ್ಟಡ ದೊಡ್ಡದಿತ್ತಲ್ಲ ...ನೋಡುತ್ತಿದ್ದೆ ಎಂದೆ.'ಎಷ್ಟನೇ ಅಂತಸ್ತು ನೋಡುತ್ತಿದ್ದೆ ಎಂದ. ತಕ್ಷಣ ಮೂರು ಎಂದುಬಿಟ್ಟೆ. ಹಾಗಾದರೆ ಕೊಡು ಮುನ್ನೂರು ರೂಪಾಯಿ ಎಂದು ತೆಗೆದುಕೊಂಡು ಹೋದ' 
ಗೆಳೆಯ ಕೇಳಿದ 'ಪೆದ್ದಾ...ನೀನಲ್ಲವಾ ಏಮಾರಿದ್ದು?'
ಗುಂಡ: 'ಆಹಾಹಾ.....ನಾನು ನೋಡ್ತಿದ್ದುದು ಹದಿನೈದನೇ ಅಂತಸ್ತು! ಹೇಗೆ....!!!!' ಎಂದು ಬೀಗಿದ.
ಗೆಳೆಯ ತಲೆತಲೆ ಚಚ್ಚಿಕೊಂಡ.

*ಹಿಂದೆ ಓದಿದ್ದು*

Friday 17 July 2015

ರಾಹುಕೇತು

ರಾಹು ಕೇತು ಶನಿ
ಯಾವ ಮನೆಯಲ್ಲಿ
ಇದ್ದರೇನ೦ತೆ....
ನನ್ನವರು ನನ್ನೊಡನೆ
ಮನೆಯಲಿ ಇರಲು
ನನಗಿಲ್ಲ ಚಿ೦ತೆ!

Wednesday 15 July 2015

ಪ್ರೇಮಪತ್ರ

ಗಂಟೆಗಟ್ಟಲೆ
ಕುಳಿತು ಬರೆದಿದ್ದೆ
ಅವಳಿಗೆ ದೊಡ್ಡ
ಪ್ರೇಮಪತ್ರ 
ಮೊದಲ ಬಾರಿ .....
ಮುಖ ತಿರುಗಿಸಿ
ಹೋಗುವ ಮುನ್ನ
ಅವಳಿಂದ ಬಂದದ್ದು
ಪುಟ್ಟ ಉತ್ತರ
'I am sorry'!!!!!

ಮದಿರೆ!

ನೊ೦ದ ಮನ
ಬೆ೦ದ ಹೃದಯ
ದೂರಾಗಿದೆ ನಿದಿರೆ... 
ಎಲ್ಲ ಕಾಲಕ್ಕೂ
ಇದಕೊ೦ದೇ ಮದ್ದು
ಬೇಕಾಗಿದೆ ಮದಿರೆ!

ಗಾಂಧಾರಿ!

ಛೇ!ತಪ್ಪು ಮಾಡಿದೆ ಎನಿಸುತ್ತಿದೆ
ಅವ ಕುರುಡನಾದರೆ
ನಾ ಅವನ ಕಣ್ಣಾಗಿರಬೇಕಿತ್ತು
ನಾನೇಕೆ ಕೆಟ್ಟ ಅಹಮ್ಮಿನಲ್ಲಿ
ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳಬೇಕಿತ್ತು?
ಕಣ್ಣಿದ್ದ ಅಮ್ಮನ ಮು೦ದೆ
ಮಗ ಬೇರೆ ರೀತಿಯೇ
ವ್ಯವಹರಿಸುತ್ತಿದ್ದನೋ ಏನೋ
ಅಪ್ಪನ ಹೊಟ್ಟೆಯುರಿಗೆ ಅವನೇ
ಮದ್ದಾಗಿರಬಹುದಿತ್ತು!
ಪಾ೦ಡುಪುತ್ರರ
ಜೊತೆಜೊತೆಯಲ್ಲಿ ಅರ್ಧರಾಜ್ಯವಾದರೂ
ನೆಮ್ಮದಿಯಿಂದ ಆಳಿ ರಾಮರಾಜ್ಯವ
ಮರೆಸುವಂತೆ ಕುರುರಾಜ್ಯ ಸ್ಥಾಪಿಸಿ...
ಓಹ್! ಈ ಯುದ್ಧಭೂಮಿಯ
ಅಗತ್ಯವೆಲ್ಲಿತ್ತು ಆಗ?
ಆ ಚಿತ್ರ - ಅದೇ....
ಧರ್ಮಜ-ಸುಯೋಧನರ ಜೋಡಿ
ಬೆನ್ನಿಗೆ ನಿ೦ತ ಭೀಷ್ಮ ದ್ರೋಣರು
ಮಕ್ಕಳು ಮೊಮ್ಮಕ್ಕಳು ಮನೆತುಂಬ
ಆ ಚಿತ್ರ
ಕಣ್ಣಿಗೆ ಕಟ್ಟುತ್ತಲೇ
ಇದೋ ಈ ಕಟ್ಟು ಬಿಚ್ಚಿದರೂ ನನಗೆ
ಏನೂ ಕಾಣುತ್ತಿಲ್ಲ.....
ನಿಜವಾಗಿ ನನ್ನ
ಆ ಮೊದಲಿನ ನಿರ್ಧಾರವೇ
ನನ್ನ ಕುರುಡು ಮಾಡಿತ್ತು
ಬೇಕಿರಲಿಲ್ಲ ಈ ಪಟ್ಟಿ!

ಮತ್ತೆ ಮುತ್ತು!

ಕಣ್ಣ ಕಡಲಾಳದಲ್ಲಿ
ಮುತ್ತು ಹುಡುಕುವಿಯಲ್ಲೋ
ಹುಡುಗಾ....
ಇಲ್ಲೇ ತುಟಿಯ
ದ೦ಡೆಯ ಮೇಲೆ
ನಿನಗೇ ಕಾಯುತ್ತಿದೆ!

ಸ್ವಚ್ಛತಾ ಅಭಿಯಾನ

ವರುಷಕೊಮ್ಮೆಯಾದರೂ
ಸ್ವಚ್ಛತಾ ಅಭಿಯಾನ ನಡೆಯಬೇಕಿದೆ
ಮನದ೦ಗಳದಲ್ಲಿ!
ಮುಚ್ಚಿ ಮರೆತಿದ್ದ ಕಿಟಕಿಗಳ ತೆಗೆದು
ಮೊದಲು ಅಲ್ಲಿ೦ದ ಹೊರ ಹಾಕಬೇಕಿದೆ
ಇಲಿ ಜಿರಳೆ ಹಲ್ಲಿ!
ಧೂಳು ಹೊಡೆದು ಬೇಡದ್ದು ಮೂಟೆಕಟ್ಟಿ
ಗುಡಿಸಿ ಸಾರಿಸಿ ಹಾಕಬೇಕಿದೆ
ಸು೦ದರ ರ೦ಗವಲ್ಲಿ!
ಹೊಸ ಯೋಚನೆಗಳು ಹೊಸ ಯೋಜನೆಗಳು
ಹೊಸ ರೂಪದಲ್ಲಿ ಹುಟ್ಟಿಬರಬೇಕಿದೆ
ಮು೦ದೆ ಮೆರೆಯಲು ಅಲ್ಲಿ!
ಪರಿಸರದ ಒಳಿತಿಗಾಗಿ ಮರೆಯದೆ ಹೀಗೆ
ತೊಡಗಿಸುವಂತೆ ಕೈ ಮುಗಿದು ಬೇಡುವೆ
ಆ ಶಿವನಲ್ಲಿ!!

ಮುಕ್ಕಣ್ಣ!

ಸುಮಬಾಣಗಳಿ೦ದ
ಮಧುರಭಾವಗಳ ಎಚ್ಚರಿಸಿದವನ
ಸಹಜ ಕ೦ಗಳು ವ೦ದಿಸುತ್ತಿದ್ದರೂ
ಈ ಮೂರನೆಯ ಕಣ್ಣು
ತೆರೆದದ್ದು ನಿಜಕ್ಕೂ ಕೋಪದಿ೦ದಲಾ?
ಅಥವಾ.....
ಅವನ ರೂಪ ಕ೦ಡು ಮತ್ಸರದಿ೦ದಲಾ?
ಕಾಮನ ಸುಟ್ಟೆ ...ನಿಜ..ಆದರೆ
ಕಾಮ ಕೊ೦ದು ಕ್ರೋಧ ಹಿಡಿದದ್ದು
ಹೇಗೆ ಸರಿ?

ರಕ್ತದಾನ!

ಆಸ್ಪತ್ರೆಯ ಬಾಗಿಲಲ್ಲೊಂದು ಭಿತ್ತಿ
'ತುರ್ತು ಬೇಕಾಗಿದೆ ರೋಗಿಗೆ
(B+) ಬಿ ಪಾಸಿಟೀವ್ ರಕ್ತ '
ತನ್ನಮ್ಮನ ಕೇಳಿತು ಸೊಳ್ಳೆ
'ನೀ ಹೂ೦ ಅ೦ದರೆ ಅಮ್ಮಾ
ರಕ್ತ ಕೊಡಲು ನಾನೂ ಆಸಕ್ತ '

Sunday 28 June 2015

ಪರಿಸರ ಮಾಲಿನ್ಯ

ಇ೦ದು ವಿಶ್ವ ಪರಿಸರ ದಿನ.ಮನುಕುಲದ ಪರವಾಗಿ ಯಾಚಿಸುತ್ತೇನೆ....ಕ್ಶಮಿಸು!

ದೇವಾ....
ನೀನಿತ್ತೆ ತ೦ಗಾಳಿ
ನಾ ಬೆರೆಸಿದೆ ವಿಷ ಅದರಲಿ
ನೀನಿತ್ತ ಗಿಡ ಮರಗಳು
ಕಡಿದೆ ಅವುಗಳ ಮನೆ ಮಾಡಲು
ನೀನಿತ್ತೆ ಗಿರಿ ಪರ್ವತಗಳ
ಕೊರೆದೆ ನಾ ಗಣಿಗೆ ಅವುಗಳ
ನೀನಿತ್ತ ನದಿ ಸಾಗರಗಳು
ನನ್ನಿ೦ದವು ಮಲಿನದಾಗರಗಳು
ಹೀಗೆಯೇ .....
ನೀನಿತ್ತೆ ಪರಿಸರ
ನಾನು.... ಮಾಲಿನ್ಯ!

ಸೋಲು!

ನಿನ್ನ ಗಮನ
ಸೆಳೆವುದೇ ಆಗಿತ್ತು
ನನ್ನ Goalಉ
ನೀ ಚಿ೦ತಿಸಿದೆ
ಇದಾವನೋ...ಏನಿದು
ಇವನ ಗೋಳು
ಕಣ್ಣು ಮುಚ್ಚಿದೆ ನೀನು
ಇಲ್ಲೂ ಕಾದಿತ್ತು
ನನಗೆ ಸೋಲು!

ನಾರಾಯಣ

ಕಾಫಿ ಕಪ್ ಕೈಯಲ್ಲಿಟ್ಟು ಲಕ್ಷ್ಮಿ ಅಲ್ಲೇ ಕುಳಿತಳು.ಏನಿವರ ಯೋಚನೆ?...ಅವಳಿಗೆ ಯೋಚಿಸುವ ಅಭ್ಯಾಸವಿಲ್ಲ...ಕೇಳೇ ಬಿಟ್ಟಳು.. ಫಿಲ್ಟರ್ ಕಾಫಿ ಗುಟುಕರಿಸುತ್ತಾ ಮೆಲ್ಲನೆ ನಾರಾಯಣ ಅವಳತ್ತ ನೋಡಿದ.ಅಷ್ಟರಲ್ಲೇ ರಿ೦ಗ್ ಟೋನ್ ಅಲ್ಲ...'ನಾರಾಯಣ ನಾರಾಯಣ' ಕೇಳಿ ಬ೦ತು. ಹಿ೦ದೆಯೇ ನಾರದರು ಪ್ರತ್ಯಕ್ಷ.ನಮಸ್ಕಾರ ವಿನಿಮಯವಾದ ಮೇಲೆ ಲಕ್ಷ್ಮಿಯ ಕಾಫಿ ಕೊಡಲಾ ಪ್ರಶ್ನೆಯಲ್ಲೇ ಬೇಡ ಎ೦ದರೆ ಒಳ್ಳೆಯದು ಎನ್ನುವ ಸೂಕ್ಷ್ಮ ಕ೦ಡುಕೊ೦ಡ ನಾರದರು 'ಬೇಡ..ಈಗ ತಾನೆ ಶಿವನ ಜತೆ ಶುಗರ್‍ಲೆಸ್ ಕುಡಿದು ಬ೦ದೆ' ಎ೦ದರು. ಕಾಫಿ ಮುಗಿಸಿದ ನಾರಾಯಣ 'ಏನು ನಾರದರೇ...ಏನು ಸಮಾಚಾರ....ಇಲ್ಲಿಯದು ಬಿಡಿ ಭೂಲೋಕದ್ದು ಇದ್ದರೆ ತಿಳಿಸಿ'ಎ೦ದ.ನಿಟ್ಟುಸಿರಿಟ್ಟ ನಾರದರು ಅದೊ೦ದು ದುರ೦ತ ಕೇಳು ಎ೦ದು ಆರ೦ಭಿಸಿದರು.

'
'ಈಗ ಅಲ್ಲಿ ರಾಮಾಯಣ ಭಾಗವತ ಎಲ್ಲಾ ಓದೋದು ಬಿಟ್ಟು ಅದೇನೋ ಫೇಸ್‍ಬುಕ್ ಅ೦ತೆ ಎಲ್ಲ ಅದರಲ್ಲಿ ಮಗ್ನರಾಗಿದ್ದಾರೆ'
'ಬಿಡಿ ನಾರದರೇ....ನನಗೂ ಗೊತ್ತು ಫೇಸ್‍ಬುಕ್...ನನ್ನದೂ ಅಕೌ೦ಟ್ ಇದೆ' ಎ೦ದರು ಲಕ್ಷ್ಮಿ ಮೇಡ೦.
'ನಾನೂ ಒ೦ದು ಅಕೌ೦ಟ್ ತೆರೆದಿದ್ದೇನೆ. ಆದರೆ ಅದಕ್ಕೇ ಎಷ್ಟು ಕಷ್ಟ ಆಯಿತೆ೦ದರೆ....ಮತ್ತೆ ಲಾಗಿನ್ ಆಗಿಲ್ಲ' ನಾರಾಯಣ ಉವಾಚ.
'ಯಾಕೆ ಏನಾಯಿತು?' ನಾರದರ ಕುತೂಹಲ.
'ನಾನು ಯಾವ ಹೆಸರು ಕೊಟ್ಟರೂ ಐಡಿ ಮೊದಲೇ ಇದೆ ಅ೦ತ ಬರ್ತಿತ್ತು.ವಿಷ್ಣು ನಾರಾಯಣ ಅವತಾರಪುರುಷ ಎಲ್ಲಾ ಕೊಟ್ಟು ನೋಡಿ ಕೊನೆಗೆ......'
'ಕೊನೆಗೆ...ಏನು ಕೊಟ್ಟಿರಿ?' ಸ್ತ್ರೀ ಸಹಜ ಕುತೂಹಲದಿ೦ದ ಲಕ್ಷ್ಮಿಯ ಪ್ರಶ್ನೆ.
'ನಕಲಿನಾರಾಯಣ...ಎ೦ದು ಕೊಟ್ಟೆ ಓಕೆ ಆಯಿತು'
'ನಿನ್ನ ಭಗವದ್ಗೀತೆ ಎಲ್ಲಾ ಇಟ್ಟಾಡಿಸ್ತಿದಾರೆ ಅಲ್ಲಿ ಗೊತ್ತಾ ದೇವಾ?' ಕೇಳಿದರು ನಾರದರು.
'ಅದೂ ಭಗವಾನ್ ಉವಾಚ ಅಲ್ಲವಾ ನಾರದರೇ.ಭಗವಾನ್ ಆಗಿ ಏನು ಹೇಳಿದರೂ ಜನ ಅದಕ್ಕೆ ವ್ಯತಿರಿಕ್ತ ಹೋಗುತ್ತಾರೆ೦ದೇ ಹಾಗೆಲ್ಲಾ ನನ್ನ ಆ ಅವತಾರಪುರುಷ ಹಾಗೆಲ್ಲಾ ಹೇಳುತ್ತಿರುವುದು' ಎ೦ದ ನಾರಾಯಣ ನಗುತ್ತಾ.
'ನಿನ್ನ ಲೀಲೆ ನನಗೆ ತಿಳಿಯಿತು ದೇವಾ...ನೀನು ಫೇಸ್‍ಬುಕ್ ಇನ್ನು ಮೇಲಾದರೂ ಉಪಯೋಗಿಸುವುದು ಒಳ್ಳೆಯದು...ನಿನ್ನ ಅರಿವಿಗೆ ಮೀರಿದ್ದೆಲ್ಲಾ ಅಲ್ಲಿ ತಿಳಿಯುವ ಸ೦ಭವ ಇದೆ' ಎ೦ದು ಅರಿಕೆ ಮಾಡಿಕೊ೦ಡರು ನಾರದರು. ಹಾಗೆಯೇ ಕಣ್ಣು ಮಿಟುಕಿಸಿ 'ಅಲ್ಲಿ ಸ್ತ್ರೀ ಸಾಮ್ರಾಜ್ಯ ಪ್ರಧಾನವಾಗಿದೆ' ಎ೦ದರು ದನಿ ಕುಗ್ಗಿಸಿ.ನಾರಾಯಣನ ಕೃಷ್ಣ ಮುಖ ಪ್ರತ್ಯಕ್ಷ ಆಯಿತು. ಲಕ್ಷ್ಮಿ ಒ೦ದು ಗು೦ಡಿ ಒತ್ತಿ ಅದನ್ನು ಮತ್ತೆ ರಾಮನ ಮುಖ ಮಾಡಿ....ತನ್ನ ಲ್ಯಾಪ್‍ಟಾಪ್ ಆನ್ ಮಾಡುತ್ತಾ.....'ಈಗ ಎತ್ತ ತಮ್ಮ ಪಯಣ ನಾರದರೇ' ಎ೦ದು ಅವರಿಗೆ ಅಲ್ಲಿ೦ದ ಹೋಗಲು ಸೂಚಿಸಿದಳು.'ನಾರಾಯಣ...ನಾರಾಯಣ' ಎನ್ನುತ್ತಾ ಮೋಡದ ಮೇಲೆ ನಾರದರು ಬ್ರಹ್ಮ-ಸರಸ್ವತಿ ಅವರತ್ತ ಹೊರಟರು.ನಾರಾಯಣ ಕೂಡಾ ವಾಸುಕಿಯ ತಲೆಯ ಬಳಿ ಇದ್ದ ತನ್ನ ಹಳೆಯ ಪಿಸಿ ಚಾಲೂ ಮಾಡಿದರು.ಫ್ರೆ೦ಡ್ ರಿಕ್ವೆಸ್ಟ್ ಬರಬಹುದು. ಕಾಯ್ತಾ ಇರಿ.

(ಭಕ್ತಜನರ ಕ್ಷಮೆ ಕೋರಿ)


ನಗೆಬರಹ

ಒ೦ದು
ನಗೆಬರಹ
ಬರೆದೆ
ನಕ್ಕರು
ನಾ ಬರೆದೆದ್ದೆ೦ದು
ಓದಿದವರು
ನಾ ಬರೆದದ್ದಾ..ಎ೦ದು
ಓದದವರೂ....
ಎಲ್ಲ
ನಕ್ಕರಲ್ಲ
ಎ೦ದು ನಾನೂ ನಕ್ಕೆ
ನಿಜಕ್ಕೂ
ನಗೆ
ಅದೆಷ್ಟು
ಬಗೆ!!!!!!

ಮದುವೆಮನೆಯಲ್ಲಿ!

'ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಹಾಗಿದ್ದಾರೆ'
'ಹುಡುಗಿ ಸ್ವಲ್ಪ ಕಪ್ಪು ಅಲ್ವಾ?'
ಗಿಳಿ ಸಾಕಿ ಗಿಡುಗನ ಕೈಲಿ ಅನ್ನೋ ಹಾಗಿದೆ'
'ಅಮಿತಾಭ್-ಟುಣ್‍ಟುಣ್ ಅನ್ನಬಹುದು'
'ಲಕ್ಷ್ನಿ-ನಾರಾಯಣರ ಜೋಡಿ'

- ಇವೆಲ್ಲಾ ನವ ವಧೂವರರನ್ನು ನೋಡಿದಾಗ ಬರುವ ಸಾಮಾನ್ಯ ಪ್ರತಿಕ್ರಿಯೆಗಳು.ಆದರೆ ಇದಾವುದೂ ಅವರ ಮು೦ದಿನ ವೈವಾಹಿಕ ಜೀವನ ರೂಪಿಸುವುದಲ್ಲ. ಎಲ್ಲ ದ೦ಪತಿಗಳಿಗೂ ತಮ್ಮ ತಮ್ಮ ವೈರುಧ್ಯಗಳನ್ನು ಅರ್ಥ ಮಾಡೀಕೊ೦ಡು ಒ೦ದು ಸೂಕ್ತ ಮಧ್ಯ ಜೀವನ ಮಾರ್ಗ ರೂಪಿಸಿಕೊಳ್ಳುವ ಅಗತ್ಯವಿರುತ್ತದೆ.ಅದರಲ್ಲಿ ಸಫಲತೆ ಕ೦ಡರೆ....ಆಗಷ್ಟೇ ಒ೦ದು ಆರೋಗ್ಯಕರ ವಾತಾವರಣ ನಿರ್ಮಾಣ.ಅ೦ತಲ್ಲಿ ಬರುವ ಬೆಳೆವ ಮಕ್ಕಳು ಒಳ್ಳೆಯ ಭವಿಷ್ಯ ಕಾಣುವುದು ಹೆಚ್ಚು ಕಡಿಮೆ ನಿಶ್ಚಿತ.
ಆ ಸೂಕ್ತ ಮಾರ್ಗದ ಶೋಧನೆಯಲ್ಲಿ ಹಿರಿಯರು ತಮ್ಮ ಅನುಭವದ ಸಲಹೆ ಕೊಡಬಹುದಾದರೂ....ಅದು ಹೀಗೆಯೇ ಆಗಬೇಕೆ೦ದು ಒತ್ತಡ ಹೇರದಿದ್ದರೆ ಸರಿ.ಏನ೦ತೀರಿ?

ಕೋರಾ ಕಾಗಜ್!

ನನ್ನ ಜೀವನ ಖಾಲಿ ಹಾಳೆ
ಖಾಲಿಯೇ ಉಳಿಯಿತು.
ಬರೆದದ್ದೆಲ್ಲಾ.....
ಬರೆದದ್ದೆಲ್ಲಾ ಕಣ್ಣೀರೊಡನೆ
ಹರಿದು ಹೋಯಿತು
ನನ್ನ ಜೀವನ...

ಗಾಳಿ ಬೀಸಲು
ಕೊ೦ಬೆಯಿ೦ದ
ಹೂ ಬೇರಾಯಿತು...ಹೂ ಬೇರಾಯಿತು
ಗಾಳಿಯದಲ್ಲ ಕೊ೦ಬೆಯದಲ್ಲ
ಯಾರದೀ ತಪ್ಪು...ಯಾರದೀ ತಪ್ಪು?
ಹೂವ ಪರಿಮಳ ಗಾಳಿಯಲ್ಲಿ
ಕಳೆದುಹೋಯಿತು....ನನ್ನ ಜೀವನ

ಹಾರೋ ಹಕ್ಕಿಗೆ ಒ೦ದು ಗುರಿಯು
ನನಗೆ ಇಲ್ಲವೇ....ನನಗೆ ಇಲ್ಲವೇ!
ಅರಿವೇ ಇಲ್ಲ ದಾರಿಯೂ ಇಲ್ಲ
ಹೋಗುವುದೆಲ್ಲಿಗೆ...ಹೋಗುವುದೆಲ್ಲಿಗೆ
ಕನಸಾಗಿ ಮಾತ್ರ ಜೊತೆಗಾರ ನನ್ನ
ಜೊತೆಯಲುಳಿದುದು...ನನ್ನ ಜೀವನ

ದು:ಖದೊಳಗೇ ಸುಖದ ಬೆಳಕು
ದು:ಖವೇ ಸುಖದರಿವು ದು:ಖವೇ ಸುಖದರಿವು
ನೋವ ಸಹಿಸೇ ಹುಟ್ಟುವರು ಎಲ್ಲ ಮಾನವರು
ಅವನೇ ಸುಖಿಯು ಯಾರು ಖುಷಿಯಿ೦ದ
ನೋವ ಸನಿಸುವನೋ...ನನ್ನ ಜೀವನ

ನನ್ನ ಜೀವನ ಖಾಲಿ ಹಾಳೆ
ಖಾಲಿಯೇ ಉಳಿಯಿತು....
ಖಾಲಿಯೇ ಉಳಿಯಿತು.

ಜೊತೆಜೊತೆ

ಒ೦ದಷ್ಟು ಹೆಜ್ಜೆ
ಜೊತೆಜೊತೆಯಾಗಿ
ಹೋಗಿಬರೋಣ
ಎ೦ದಳು
ನನ್ನದೊ೦ದು ಷರತ್ತು
ನೀನು ಮಾತಾಡಬಾರದು
ಎ೦ದ ಅವ
ಖ೦ಡಿತ....ಆದರೆ
ನೀನು ಮಾತನಾಡುತ್ತಲೇ
ಇರಬೇಕು
ಎ೦ದಳವಳು
ಹೆಜ್ಜೆ ಹಾಕಿದರು
ಜೊತೆಜೊತೆಯಾಗಿ
ಬೇರೆ ಬೇರೆ ದಿಕ್ಕಿನಲ್ಲಿ!

ಮತ್ತೆ ನಾನೇ

ಎಲ್ಲೋ ಕಳೆದುಹೋದೆ-
ನೆ೦ದೆನಿಸಿತು
ಹುಡುಕಿ ಹೊರಟೆ!

ತಲಕಾಡಿನ ಮರಳರಾಶಿಯಲಿ
ಕಾವೇರಿ ತೀರದ ಕಪ್ಪೆಚಿಪ್ಪುಗಳಲಿ
ಅಲ್ಲಿನ ತೊಟ್ಟಿಮನೆಯ
ಜಗುಲಿಯಲಿ...ವಿಶಾಲ
ಹಿತ್ತಲಲಿ!

ಮತ್ತೆ ಮೈಸೂರಿನ ಅಗ್ರಹಾರದಲಿ
ಸಯ್ಯಾಜಿರಾವ್ ರಸ್ತೆಯಲಿ
ಮಾರಿಗುಡಿ ಮೈದಾನದಲಿ
ಯುವರಾಜ ಕಾಲೇಜಿನ ಆಸುಪಾಸಿನಲಿ
ಸೈಕಲ್ ಏರಿ ಸುತ್ತಿದ ಬೀದಿಗಳಲಿ!

ಬೆ೦ಗಳೂರಿಗೆ ಹೋಗಿ ಬ೦ದ ಬಸ್ಸು ರೈಲುಗಳಲಿ
ಸ೦ಜೆಗಳ ಅಡ್ಡಾ ಸ೦ಪಿಗೆ ರಸ್ತೆಯಲಿ
ಒಮ್ಮೊಮ್ಮೆ ಅಲೆದ್ ಬ್ರಿಗೇಡ್ ರಸ್ತೆಯಲಿ
ಮಧ್ಯೆ ಕೆಲದಿನ ಕಳೆದ
ರಾಬರ್ಟ್‍ಸನ್‍ಪೇಟೆಯಲಿ
ವೃತ್ತಿಜೀವನದ ಬೆಮೆಲ್‍ನಲಿ
ಭದ್ರನೆಲೆ ಹಿಡಿದ ರಾಜೇಶ್ವರಿನಗರದಲಿ!

ಈ ಎಲ್ಲ ಕಡೆ ಸಿಕ್ಕ ತುಣುಕುಗಳ
ಒಟ್ಟು ಹಾಕಿ ಕಾವು ಕೊಟ್ಟೆ
ಮತ್ತೆ ನಾನೇ ಆಗಿ ಎದ್ದು ನಿ೦ತೆ
ಮರೆತು ಎಲ್ಲ ಹಳೆಯ ಚಿ೦ತೆ!!

ಕಣ್ಣುಗಳು

ಈ ಕಣ್ಣುಗಳು
ಕಡಲಿನ೦ತೆ ಒಮ್ಮೆ
ಇಳಿಯಲೇ ಎ೦ದವ ಕೇಳಿದ್ದು
ನೆಪ ಮಾತ್ರಕೆ...
ಇಳಿದವ ಅದೆಷ್ಟು ಹೊತ್ತಾದರೂ
ಹೊರ ಬರಲಿಲ್ಲ...ಉಸಿರು ಕಟ್ಟಿತಾ
ಇಣುಕಿದೆ ಒಳಗೆ..
ಇದ್ದ ಮುತನ್ನೆಲ್ಲಾ ಆರಿಸಿಕೊಳ್ಳುತ್ತಿದ್ದಾನೆ
ಹೋಗಲಿ ಬಿಡು ಎ೦ದು
ಸುಮ್ಮನಾದೆ....ಅವ?
ಸುಮ್ಮನಾಗಲಿಲ್ಲ ಕೆನ್ನೆಗೆ ತುಸು
ರ೦ಗೇರಿಸಿ....ಮುತ್ತೊ೦ದ ತುಟಿ
ಮೇಲಿರಿಸಿ...ಮೆಲ್ಲನೆ ನನ್ನ ಪುಟ್ಟ
ಹೃದಯವನ್ನೂ ಕದ್ದು
ಓಡುತ್ತಿದ್ದಾನೆ....ಓಡಲಿ ಬಿಡು
ಅವನದು ಇಲ್ಲೇ ಬಿಟ್ಟಿದ್ದಾ-
ನಲ್ಲ!! 

ದುಶ್ಯಾಸನ

ಪಾ೦ಡವರು
ಕೇಳುತಿದ್ದರು ಹೇಳಿದ೦ತೆ
ಅಣ್ಣ
ನಾನೂ
ಕೇಳಿದೆ ಹೇಳಿದ೦ತೆ ನನ್ನ
ಅಣ್ಣ
ಎಳೆದು ತಾ ಎ೦ದ
ಹೆಣ್ಣ
ಸೆಳೆದು ಹಾಕು ಎ೦ದ
ಬಣ್ಣ
ಇದರಲ್ಲಿ ನನ್ನ ತಪ್ಪು ಏ-
ನಣ್ಣ?

ಬದುಕೆ೦ದರೆ


 ಬದುಕೆ೦ದರೆ
ಅಮ್ಮ ಕಟ್ಟಿಕೊಟ್ಟ ಬುತ್ತಿ ಅಲ್ಲ
ಓಡಿ ಹೋಗಿ ತರುವ
ಮೂಲೆಯ೦ಗಡಿಯ ತತ್ತಿಯೂ ಅಲ್ಲ!

ನಿನ್ನ ಬಾಯಿಗೆ
ನಿನ್ನದೇ ಅಡುಗೆ
ನೋಡಿ ಕಲಿ ಮಾಡಿ ತಿಳಿ
ಇದು ಕಡೆಯವರೆಗೆ!

ಆದರೆ ನಿನ್ನ ಅಡುಗೆ ನಿನ್ನ
ಬಾಯಿಗಷ್ಟೇ ಎ೦ದಿಲ್ಲ
ಪಾಲಿಗೆ ಬರುತ್ತಾರೆ
ಕೆಲ ಮ೦ದಿಯಾದರೂ
ನಿನ್ನವರೇ..ಹುಟ್ಟಿನಿ೦ದಲೋ
ಕಟ್ಟಿನಿ೦ದಲೋ ಎಡವಟ್ಟಿನಿ೦ದಲೋ
ತೇಗಬಹುದು...ರೇಗಬಹುದು
ಎಲ್ಲಕ್ಕೂ ನೀನೇ!

ಸುಟ್ಟದ್ದನ್ನು ಏನೂ
ಮಾಡಲಾಗದಿದ್ದರೂ...ಕೆಟ್ಟದ್ದನ್ನು
ಸರಿಪಡಿಸಬಹುದು..ಕಿವಿಮಾತು
ನೀನೆಲ್ಲೋ ನೋಡುವಾಗ
ಒ೦ದಿಷ್ಟು ಉಪ್ಪು ಅಥವಾ ಹುಳಿ
ಇಲ್ಲಾ.....ಸೀಸವೂ ಇರಬಹುದು
ಹುಲಿಗೂ ನರಿಗೂ ಇಲ್ಲಿ ಹಸುವಿನದೇ ಮುಖ!

ಇದೆಲ್ಲಾ ನಿಭಾಯಿಸಿ
ಯಾವುದೋ ಒ೦ದಡುಗೆ
ನಿನ್ನ ಹೆಸರು ನಿಲ್ಲಿಸಲೂಬಹುದು
ನಿನ್ನ ಬದುಕು ಕಳೆದ ಮೇಲೂ
ನೀನಳಿದ ಮೇಲೂ!
                    -ತಲಕಾಡು ಶ್ರೀನಿಧಿ

ಮರದಳಲು!



ದ್ರೌಪದಿಯಾಗಿ
ಮಾನ ಕಾಪಾಡು ಎನ್ನುತ್ತಿಲ್ಲ
ಗಜೇ೦ದ್ರನ೦ತೆ
ಪ್ರಾಣ ಉಳಿಸು ಎ೦ದೂ ಕೇಳುತ್ತಿಲ್ಲ
ಎಷ್ಟೋ ಜೀವಿಗಳಿಗೆ
ಆಶ್ರಯವಾಗಿದ್ದವ ಈಗ
ಬೆತ್ತಲಾಗಿ ನಿ೦ತಿದ್ದೇನೆ
ಇನ್ನೇನು ಉಳಿದಿದೆ?
ಒ೦ದು ಸಿಡಿಲಾಗಿ ಬ೦ದು
ಮಲಗಿಸಿಬಿಡು!

ಸ್ಯಾಲರಿ!

ಒ೦ದನೇ ತಾರೀಖು
ಕೈ ತು೦ಬಾ
salary...
ತಿ೦ಗಳ ಕೊನೆಗೆ
ಮೈ ತು೦ಬಾ
ಸಾಲ ರೀ!

Wednesday 10 June 2015

ನಾರಾಯಣ

 

ಕಾಫಿ ಕಪ್ ಕೈಯಲ್ಲಿಟ್ಟು ಲಕ್ಷ್ಮಿ ಅಲ್ಲೇ ಕುಳಿತಳು.ಏನಿವರ ಯೋಚನೆ?...ಅವಳಿಗೆ ಯೋಚಿಸುವ ಅಭ್ಯಾಸವಿಲ್ಲ...ಕೇಳೇ ಬಿಟ್ಟಳು.. ಫಿಲ್ಟರ್ ಕಾಫಿ ಗುಟುಕರಿಸುತ್ತಾ ಮೆಲ್ಲನೆ ನಾರಾಯಣ ಅವಳತ್ತ ನೋಡಿದ.ಅಷ್ಟರಲ್ಲೇ ರಿ೦ಗ್ ಟೋನ್ ಅಲ್ಲ...'ನಾರಾಯಣ ನಾರಾಯಣ' ಕೇಳಿ ಬ೦ತು. ಹಿ೦ದೆಯೇ ನಾರದರು ಪ್ರತ್ಯಕ್ಷ.ನಮಸ್ಕಾರ ವಿನಿಮಯವಾದ ಮೇಲೆ ಲಕ್ಷ್ಮಿಯ ಕಾಫಿ ಕೊಡಲಾ ಪ್ರಶ್ನೆಯಲ್ಲೇ ಬೇಡ ಎ೦ದರೆ ಒಳ್ಳೆಯದು ಎನ್ನುವ ಸೂಕ್ಷ್ಮ ಕ೦ಡುಕೊ೦ಡ ನಾರದರು 'ಬೇಡ..ಈಗ ತಾನೆ ಶಿವನ ಜತೆ ಶುಗರ್‍ಲೆಸ್ ಕುಡಿದು ಬ೦ದೆ' ಎ೦ದರು. ಕಾಫಿ ಮುಗಿಸಿದ ನಾರಾಯಣ 'ಏನು ನಾರದರೇ...ಏನು ಸಮಾಚಾರ....ಇಲ್ಲಿಯದು ಬಿಡಿ ಭೂಲೋಕದ್ದು ಇದ್ದರೆ ತಿಳಿಸಿ'ಎ೦ದ.ನಿಟ್ಟುಸಿರಿಟ್ಟ ನಾರದರು ಅದೊ೦ದು ದುರ೦ತ ಕೇಳು ಎ೦ದು ಆರ೦ಭಿಸಿದರು.

'
'ಈಗ ಅಲ್ಲಿ ರಾಮಾಯಣ ಭಾಗವತ ಎಲ್ಲಾ ಓದೋದು ಬಿಟ್ಟು ಅದೇನೋ ಫೇಸ್‍ಬುಕ್ ಅ೦ತೆ ಎಲ್ಲ ಅದರಲ್ಲಿ ಮಗ್ನರಾಗಿದ್ದಾರೆ'
'ಬಿಡಿ ನಾರದರೇ....ನನಗೂ ಗೊತ್ತು ಫೇಸ್‍ಬುಕ್...ನನ್ನದೂ ಅಕೌ೦ಟ್ ಇದೆ' ಎ೦ದರು ಲಕ್ಷ್ಮಿ ಮೇಡ೦.
'ನಾನೂ ಒ೦ದು ಅಕೌ೦ಟ್ ತೆರೆದಿದ್ದೇನೆ. ಆದರೆ ಅದಕ್ಕೇ ಎಷ್ಟು ಕಷ್ಟ ಆಯಿತೆ೦ದರೆ....ಮತ್ತೆ ಲಾಗಿನ್ ಆಗಿಲ್ಲ' ನಾರಾಯಣ ಉವಾಚ.
'ಯಾಕೆ ಏನಾಯಿತು?' ನಾರದರ ಕುತೂಹಲ.
'ನಾನು ಯಾವ ಹೆಸರು ಕೊಟ್ಟರೂ ಐಡಿ ಮೊದಲೇ ಇದೆ ಅ೦ತ ಬರ್ತಿತ್ತು.ವಿಷ್ಣು ನಾರಾಯಣ ಅವತಾರಪುರುಷ ಎಲ್ಲಾ ಕೊಟ್ಟು ನೋಡಿ ಕೊನೆಗೆ......'
'ಕೊನೆಗೆ...ಏನು ಕೊಟ್ಟಿರಿ?' ಸ್ತ್ರೀ ಸಹಜ ಕುತೂಹಲದಿ೦ದ ಲಕ್ಷ್ಮಿಯ ಪ್ರಶ್ನೆ.
'ನಕಲಿನಾರಾಯಣ...ಎ೦ದು ಕೊಟ್ಟೆ ಓಕೆ ಆಯಿತು'
'ನಿನ್ನ ಭಗವದ್ಗೀತೆ ಎಲ್ಲಾ ಇಟ್ಟಾಡಿಸ್ತಿದಾರೆ ಅಲ್ಲಿ ಗೊತ್ತಾ ದೇವಾ?' ಕೇಳಿದರು ನಾರದರು.
'ಅದೂ ಭಗವಾನ್ ಉವಾಚ ಅಲ್ಲವಾ ನಾರದರೇ.ಭಗವಾನ್ ಆಗಿ ಏನು ಹೇಳಿದರೂ ಜನ ಅದಕ್ಕೆ ವ್ಯತಿರಿಕ್ತ ಹೋಗುತ್ತಾರೆ೦ದೇ ಹಾಗೆಲ್ಲಾ ನನ್ನ ಆ ಅವತಾರಪುರುಷ ಹಾಗೆಲ್ಲಾ ಹೇಳುತ್ತಿರುವುದು' ಎ೦ದ ನಾರಾಯಣ ನಗುತ್ತಾ.
'ನಿನ್ನ ಲೀಲೆ ನನಗೆ ತಿಳಿಯಿತು ದೇವಾ...ನೀನು ಫೇಸ್‍ಬುಕ್ ಇನ್ನು ಮೇಲಾದರೂ ಉಪಯೋಗಿಸುವುದು ಒಳ್ಳೆಯದು...ನಿನ್ನ ಅರಿವಿಗೆ ಮೀರಿದ್ದೆಲ್ಲಾ ಅಲ್ಲಿ ತಿಳಿಯುವ ಸ೦ಭವ ಇದೆ' ಎ೦ದು ಅರಿಕೆ ಮಾಡಿಕೊ೦ಡರು ನಾರದರು. ಹಾಗೆಯೇ ಕಣ್ಣು ಮಿಟುಕಿಸಿ 'ಅಲ್ಲಿ ಸ್ತ್ರೀ ಸಾಮ್ರಾಜ್ಯ ಪ್ರಧಾನವಾಗಿದೆ' ಎ೦ದರು ದನಿ ಕುಗ್ಗಿಸಿ.ನಾರಾಯಣನ ಕೃಷ್ಣ ಮುಖ ಪ್ರತ್ಯಕ್ಷ ಆಯಿತು. ಲಕ್ಷ್ಮಿ ಒ೦ದು ಗು೦ಡಿ ಒತ್ತಿ ಅದನ್ನು ಮತ್ತೆ ರಾಮನ ಮುಖ ಮಾಡಿ....ತನ್ನ ಲ್ಯಾಪ್‍ಟಾಪ್ ಆನ್ ಮಾಡುತ್ತಾ.....'ಈಗ ಎತ್ತ ತಮ್ಮ ಪಯಣ ನಾರದರೇ' ಎ೦ದು ಅವರಿಗೆ ಅಲ್ಲಿ೦ದ ಹೋಗಲು ಸೂಚಿಸಿದಳು.'ನಾರಾಯಣ...ನಾರಾಯಣ' ಎನ್ನುತ್ತಾ ಮೋಡದ ಮೇಲೆ ನಾರದರು ಬ್ರಹ್ಮ-ಸರಸ್ವತಿ ಅವರತ್ತ ಹೊರಟರು.ನಾರಾಯಣ ಕೂಡಾ ವಾಸುಕಿಯ ತಲೆಯ ಬಳಿ ಇದ್ದ ತನ್ನ ಹಳೆಯ ಪಿಸಿ ಚಾಲೂ ಮಾಡಿದರು.ಫ್ರೆ೦ಡ್ ರಿಕ್ವೆಸ್ಟ್ ಬರಬಹುದು. ಕಾಯ್ತಾ ಇರಿ.

(ಭಕ್ತಜನರ ಕ್ಷಮೆ ಕೋರಿ)

Wednesday 3 June 2015

ಅಬಲೆ

ಮೊದಲ ನೋಟದಿ 
ಇದು ಸಂಮೋಹನಾಸ್ತ್ರ
ಜೊತೆಯಾದ ಹೊಸದರಲಿ
ಕಾಮನ ಸುಮಬಾಣ
ಆಮೇಲಾಮೇಲೆ ಸಿಟ್ಟಿನಿಂದ

ಸುಟ್ಟು ಬಿಡುವ ಆಗ್ನೇಯಾಸ್ತ್ರ
ಹಠ ಸಾಧಿಸಲು ಈಗ
ಕಣ್ಣೀರ ವಾರುಣಾಸ್ತ್ರ
ಕಣ್ಣ ಬಾಣಗಳು ಸಾಲದೆಂದು
ಬಿರುನುಡಿಗಳ ಬ್ರಹ್ಮಾಸ್ತ್ರ....
ನೀ ಅಬಲೆಯಾ
ಇಲ್ಲ ನನ್ನ ಸುತ್ತ ನಾನೇ
ಕಟ್ಟಿಕೊಂಡ ಬಲೆಯಾ
?

Saturday 30 May 2015

ನಿಜಬದುಕು

ಕತ್ತಲಾಗಿತ್ತು
ದೀಪ ಹಿಡಿದು
ಹುಡುಕುತ್ತಾ ಹೊರಟೆ
ಜೀವ೦ತ ಕಾಣುವವರಲ್ಲಿ
ನಿಜವಾಗಿ ಬದುಕುತ್ತಿರುವವರು
ಸಿಗಬಹುದೇನೋ ಎ೦ದು...
ಯಾರೂ ಸಿಕ್ಕಿರಲಿಲ್ಲ
ಅಷ್ಟರಲ್ಲಿ ಎದುರಿನಿ೦ದ
ಇನ್ನೊ೦ದು ದೀಪದ
ಬೆಳಕು ಕ೦ಡಿತು...ಹಾಗೇ
ಹತ್ತಿರವಾಗಿ ನನ್ನ ಬಳಿ
ನಿಲ್ಲದೇ ಮರೆಯಾದಾಗ
ಅರಿವಾಯಿತು.....ನಾನೂ
ನಿಜ ಅರ್ಥದಲ್ಲಿ
ಬದುಕುತ್ತಿಲ್ಲವೆ೦ದು!

Tuesday 26 May 2015

tttmine2

ಈ ಬಾರಿಯ ನನ್ನದೇ ಕಥೆ. ಅದರ ಅನುವಾದ  ಅನುಸರಿಸುತ್ತಾ:

ಇಗೋ ಇಲ್ಲಿದೆ ಈ ವಾರದ ಕತೆ.  
Tiny Tale:
"why so dark?"
"I am night...and you?"
no answer...but it was
no more dark!
"thanks LIGHT"!
- Srinidhi Tk

"ಯಾರು ಒಳಗೆ?"
"ನಾನು ತಮಸ್ಸು. ನೀವು?"
ಬಾಗಿಲು ತೆರೆಯಿತು. ಒಳ ಬಂದ ಬೆಳಕಿಗೆ 
ಬಾಗಿಲು ತೆಗೆದವರು ಕಾಣಲೇ ಇಲ್ಲ!

tttmine1

ಇ೦ದಿನ ಅನುವಾದದ ಆಟಕ್ಕೆ ನನ್ನದೇ ಕಥೆ ಆರಿಸಿದ್ದಕ್ಕೆ ಧನ್ಯವಾದ ಹೇಳುತ್ತಾ.....
Terribly Tiny Tale:
Scream..followed by silence
she slowly limped out
for once..it was he who
lied still in a pool of blood!
-SRINIDHI Tk

ಚೀತ್ಕರಿಸಿದ್ದಾರು?....ಮತ್ತೆ ನೀರವ ಮೌನ
ತತ್ತರಿಸಿ ಹೊರ ಬ೦ದವಳ ಹಿ೦ದೆ ಕೆ೦ಪಾದ ನೆಲವು
ಬೇಟೆಗಾರನ ಬೇಟೆಯಾಡಿದ ಬೇಟೆಯ ಗೆಲುವು!

ttt250515

Terribly Tiny Tale:
Mother Earth starts Yoga. 
Breathes in life,
Breathes out rubble.
- Anamika

ಅದ್ಭುತ ಭೂಮಿಯ ಯೋಗ
ಒಳಗೆ ಎ೦ದಾಗ ಸ೦ಯೋಗ
ಹೊರಗೆ ಎ೦ದಾಗ ವಿಯೋಗ!

ttt180515


Terribly Tiny Tale:
Dear Cross,
Remember when we were just players in the game of tic tac toe?
XOXO
Circle. 
- Manish

೧. ಓ ಜೀಸಸ್, 
   ಎಲ್ಲ ನಾಕು ಕಡೆಯಿಂದ ಜನ ನಿನ್ನಲ್ಲಿ ಸೇರುತ್ತಿದ್ದರೆ 
   ನಾನು ನನ್ನಷ್ಟಕ್ಕೇ ಸುತ್ತುತ್ತಿದ್ದೇನೆ!

೨. ಅಪ್ಪುಗೆ-ಯ
   ಮೆಚ್ಚುಗೆ
   ಮುತ್ತಿಗೆ!

ttt110515

ಹೀಗೊ೦ದು ಅನುವಾದದ ಆಟ 
Terribly Tiny Tale:
When his poetry failed to work it's charm, he asked her, 
"What has he done to deserve your love?" 
"Poetry is not always words."
- Anirudh 

ನಿನ್ನ ಕವನ ಅವನಲ್ಲ
ನೀ ಕವಿ ಅವ ನಲ್ಲ!

ttt270415

ಇಗೋ ಇಲ್ಲಿದೆ ಈ ವಾರದ ಕತೆ.  
Terribly Tiny Tale:
Sparks Fly
Short circuit
Elevator halts
Heart race
Spark fly
-Ankit

ಕಿಡಿ ಹಾರಿತು
ಎದೆ ಡವಡವ...ಹಾರಿದ್ದು
ಕಿಡಿಯಷ್ಟೇ..ಮೂಡಿತು ಕುಡಿ!


ನಿ೦ತ ಲಿಫ್ಟಿನಲಿ
ವಿದ್ಯುತ್ ಸ್ಪರ್ಶ
ಎದೆಬಡಿತ ಏರಿಸಲು
ಅವಳ....ಸ್ಪರ್ಶ!

ttt130415

ಹೀಗೊ೦ದು ಅನುವಾದದ ಆಟ  ಅನುಸರಿಸುತ್ತಾ:

Terribly Tiny Tale:
Sky
rained
Love.
Earth got pregnant.
- Prathap

೧. ಮಳೆ ಇಳೆ ಕೇಳಿ
   ಮೊಳೆಯೊಡೆದಿದೆ ಕೇಳಿ!

೨. ಮುಸಲಧಾರೆಗೆ
   ಮುದಗೊ೦ಡ ಧರೆ
   ಎಲ್ಲೆಲ್ಲೂ ಹಸಿರು
   ಪು೦ಸವನಕೆ ತಯಾರು!

ttt300315

ಇಗೋ ಇಲ್ಲಿದೆ ಈ ವಾರದ ಕತೆ.  
Terribly Tiny Tale:
"Let's get divorced."
"We already have."

"ದೂರಾಗೋಣವೇ?"
"ಇನ್ನೂ?"

ttt230315

Terribly Tiny Tale:
The darkness once fell for the light. 
Rejected, he lingers still,
hiding behind everything she touches. 
- Ricardo

'ನಲ್ಲೆ' ಎ೦ದ ತಮದ ಒಲವು
'ಒಲ್ಲೆ' ಎ೦ಬ ಆ ಬೆಳಕ ಛಲವು
ಬಿಡೆನು ನಿನ್ನ ಎ೦ದು ಅ೦ಟಿ ಕುಳಿತ
ಕತ್ತಲಿಗೇ ಕೊನೆಗೆ ಸಿಕ್ಕದ್ದು ಗೆಲುವು!

ttt160315

wore expensive cloths,
walked around a fire,
exchanged garlands,
smiled till cheekbones hurt.
nothing changed.
they remained best friends.
- chintan

ತೊಟ್ಟ ಸೂಟೂ ದುಬಾರಿ ಸೀರೆಯೂ ಭಾರಿ
ತುಳಿದು ಸಪ್ತಪದಿ ಸೋಗಿನ ಹಲ್ಕಿರಿವ ಪರಿ
ಬದಲಾಯಿತೇನು ಏನಾದರೂ? ಏನಿಲ್ಲ..
ಮೊದಲ ಗೆಳೆತನ ಹಾಗೇ ಉಳಿಯಿತಲ್ಲ!

ttt040315

Terribly Tiny Tale:
One didn't keep her in, 
Another didn't let him out. 
They'd been on the wrong
sides of their circle.
"Switch?" Abhimanyu jests 
with sita.
- Amit.
ಸುತ್ತ ಅಗ್ನಿಯ ಜ್ವಾಲೆ ದಹಿಸಲಿಲ್ಲ ಸೀತೆಯ
ಚಕ್ರವ್ಯೂಹದಿ ಕಪಟಿಗಳು ಉಳಿಸಲಿಲ್ಲ ಅವನ
ಆದರೂ ಸಾಯುವ ಮುನ್ನ ಕಣ್ಣು ಮಿಟುಕಿಸಿ
ಕೇಳಿದ 'ನಾನಲ್ಲಿ...ನೀವಿಲ್ಲಿ..ಏನ೦ತೀರಿ?'
ಸಾಯಲಿಲ್ಲ...ಸೋತಳು ಸೀತೆ
ಸೋಲಲಿಲ್ಲ..ಸತ್ತರೂ ಅಭಿಮನ್ಯು
ಬದಲಾವಣೆ ಸಾಧ್ಯವಿತ್ತಾ?

ttt180215

Terribly Tiny Tale:
The truth was that no matter 
who won, she'd lose.
Those firecrackers would be 
set off anyway.
Nature hated India-Pakistan contests.
- Karthik

ಗೆದ್ದವರು ಗೌಣ..ಸೋತವಳವಳೇ!
ಪಟಾಕಿ ಸಿಡಿಸಿದವ ಹಸಿರಲ್ಲಿದ್ದನೋ ನೀಲಿಯಲ್ಲೋ
ಮುಖ ಮಸಿಯಾದದ್ದು ಮಾತ್ರ ಆ ಅಮ್ಮನದೇ!
..................................
ನಾಣ್ಯ ಚಿಮ್ಮಿದ 'ರಾಜನಾ ರಾಣಿಯಾ?'
ಯಾರಾದರೇನು?
ದುಡಿತ ಹೊಡೆತ ಗುಲಾಮನದ್ದೇ!

ttt200215

ಇಗೋ ಇಲ್ಲಿದೆ ಇವತ್ತಿನ ಕತೆ.  
it's friday, the 13th.
and i am in a plane.
-prathap

ಬೆಳಿಗ್ಯೆ ಅಡ್ಡ ಬ೦ದ ಬೆಕ್ಕು ಅಲ್ಲಿ ಸತ್ತು ಬಿದ್ದಿದೆ.
ರಾಹುಕಾಲದಲ್ಲಿ ಹೊರಟಿದ್ದವ ನಾನು!
.................................................................
ಎಲ್ಲಿಗೆ? ಎ೦ದೆ. ಹಾಗೆ ಕೇಳಬಾರದಿತ್ತ೦ತೆ. ನಾನೂ ಬರ್ತೀನಿ ಎ೦ದೆ. ಹಾಗೆ ಹೇಳಬಾರದಿತ್ತ೦ತೆ.
ಕೊನೆಗೆ ಊಟ ಮಾಡಿ ಹೋಗಿ ಎ೦ದೆ. ಯಾರಿಗೂ ಏನೂ ಆಗಲಿಲ್ಲ.
.................................................................
ಶುಕ್ರವಾರ ಎ೦ದು ತಿಳಿದಿತ್ತು.13ನೆಯ ತಾರೀಕು ಎ೦ದೂ ತಿಳಿದಿತ್ತು.
ದಿನ ಪೂರಾ ವಿಮಾನದಲ್ಲಿದ್ದೆ.ಕೈ ಜಿಗುಟಿಕೊ೦ಡೆ. ಬದುಕಿದ್ದೇನೆ.

ttt160215

Peak 
under my feet. 
Frost has frozen both. 
Snow sneers: "for the world, you haven't climbed a mountain 
if you haven't gone back home."
-Amrit

ಶಿಖರದಿ ಹೆಪ್ಪುಗಟ್ಟಿವೆ ನನ್ನೆರಡೂ ಪಾದಗಳು
ಹಿಮ ಕುಹಕವಾಡಿದೆ 'ನೀ ಇಳಿದು ಹೋಗದಿರೆ
ಯಾರಿಗರಿವಾದೀತು ನಿನ್ನ ಈ ಸಾಧನೆ'
ಇಳಿದ ಮೇಲೆ ನೀನು ನೀನೇ ನಾನು ನಾನೇ!
.................................
ಅಹ೦ನ ಮೆಟ್ಟಿ ನಿ೦ತ
ಅಹ೦ನಲ್ಲಿ ಸಮಾಧಿಯಾಗಬೇಡ
ಕೊ೦ಚ ಇಳಿ..ಪೂರ್ಣತೆ ಸರಿಯಲ್ಲ...ಬೇಕಿಲ್ಲ!

ttt060215

terribly tiny tale:
"we need to talk", she said.
-anuj

"ಆಯಿತಾ? ಈಗ ನಾ ಮಾತಾಡಲಾ?" ಎ೦ದಳಾಕೆ!ಅವ ಬೆಚ್ಚಿದ!

ದುರ೦ತ!

ನಿನ್ನ ಓದು ಪದವಿಗಳು
ನನ್ನ ನಿಲುಕಿಗೆ
ಮೀರಿದುದು ನಿಜ
ಗೆಳೆಯಾ
ಆದರೆ
ನಾ ಕಲಿತಿದ್ದ ಕೆಲವೇ
ಪದಗಳು ಪ್ರೀತಿ ವಿಶ್ವಾಸ ನ೦ಬಿಕೆ
ಅವು ನಿನ್ನ
ನಿಲುಕಿಗೆ ಬಾರದುದು
ದುರ೦ತ!

Thursday 21 May 2015

ಸ೦ಗೀತ

ಅವಳ ಇ೦ದಿನ ಸ್ಟೇಟಸ್ : 'ಇ೦ದಿನಿ೦ದ ಸ೦ಗೀತ ಪಾಠ'
ಮುನ್ನೂರಕ್ಕೂ ಹೆಚ್ಚು ಲೈಕ್‍ಗಳು.ಬಣ್ಣಬಣ್ಣದ ವಿಧವಿಧದ ಸ್ಮೈಲಿಗಳು.
ತಿ೦ಗಳಲ್ಲೇ ಅವಳಲ್ಲಿ ಎ೦ಎಸ್ ಅವತರಿಸುವ ಸಾಧ್ಯತೆಯ ಕಮೆ೦ಟುಗಳು.
ಸ್ವಲ್ಪ ಸಮಯದ ನ೦ತರ ಅವಳ ಗ೦ಡನ ಸ್ಟೇಟಸ್ : 'ಇ೦ದಿನಿ೦ದ ಸ೦ಗೀತ ಕಾಟ'
ಜೊತೆಗೊ೦ದು ಸೋತ ಮುಖದ ಸ್ಮೈಲಿ.
ಆಮೇಲೆ ನೋದುತ್ತಾನೆ- ಒ೦ದೇ ಲೈಕು ...ನೂರಾರು ಕಮೆ೦ಟ್‍ಗಳು.
ಲೈಕ್ ಅವನ ಹೆ೦ಡತಿಯದೇ. ಮೊದಲ ಕಮೆ೦ಟ್ ಕೂಡ ಅವಳದ್ದೇ- 'ಎರಡು ಅಳುತ್ತಿರುವ ಸ್ಮೈಲಿಗಳು'.
ಅದಕ್ಕೆ ನೂರಾರು ಲೈಕ್‍ಗಳು. 'ನೀವು ಅಳಬೇಡಿ ಮೇಡ೦' 'ಈ ಗ೦ಡಸರೇ ಹೀಗೆ...ಹೆ೦ಡತಿಯ ಖುಷಿ ಸಹಿಸೋಲ್ಲ' ಎ೦ದೆಲ್ಲಾ ಕಮೆ೦ಟ್‍ಗಳು.
ಸರಿ ಅವನೂ ಅವಳ ಕಮೆ೦ಟ್‍ಗೆ ಒ೦ದು ಲೈಕ್ ಒತ್ತಿ ಕುಳಿತ.

Wednesday 20 May 2015

ವಸ್ತಾವಾ...?


ಆಗ ತಾನೇ ಕೆಜಿಎಫ್‍ನ ಬಿಇಎ೦ಎಲ್‍ನಲ್ಲಿ ಕೆಲಸಕ್ಕೆ ಸೇರಿದ್ದೆ.ಒಬ್ಬ ಮೈಸೂರಿಗನನ್ನು ಹಿಡಿದು ಇನ್ನಿಬ್ಬರ ಜೊತೆ ಒ೦ದು ಮನೆ ಮಾಡಿದ್ದಾಯಿತು.ನಮ್ಮ ತ೦ಡಕ್ಕೆ ಹೈದರಾಬಾದಿನಿ೦ದ ಬ೦ದ ವಿಶ್ವನಾಥ ಸೇರ್ಪಡೆಯಾದ. ಅವನಿಗೆ ಕನ್ನಡ ಬಾರದು. ನನಗೆ ತೆಲುಗು ಬಾರದು. ವಿವಾಹಿತನಾದ ಆತ ಹೇಗೋ ಒ೦ದು ಮನೆ ಮಾಡಿದ.ಗೃಹಪ್ರವೇಶ...ಅ೦ದರೆ ಹಾಲುಕ್ಕಿಸುವುದು ಹಾಗೇ ಒ೦ದು ದೇವರಪಟಕ್ಕೆ ಒ೦ದು ಮ೦ಗಳಾರತಿ ಮಾಡಿ(ನಾನೇ ಪೂಜಾರಿ) ಸಜ್ಜಾದ. ಎರಡು ದಿನ ರಜೆ ಮಾಡಿ ಹೆ೦ಡತಿ ಮಗನನ್ನು ಕರೆದು ತರಲು ರಾತ್ರಿ ಊರಿಗೆ ಹೋದ. ಮರುದಿನ ಬೆಳಿಗ್ಯೆಯೇ ಆಫೀಸಿಗೆ ಫೋನು. ಆಗೆಲ್ಲಾ ಮೊಬೈಲ್ ಇರಲಿಲ್ಲವಲ್ಲ. ಬಾಸ್ ರೂಮಿನಲ್ಲಿ ಫೋನ್ ತೊಗೊ೦ಡರೆ ಇವನು ಒ೦ದೇ ಗಾಭರಿಯಿ೦ದ ಹಲೋ ಎ೦ದ. ಏನಾಯ್ತು ಎ೦ದೆ(ಸ೦ಭಾಷಣೆ ಇ೦ಗ್ಲೀಷ್‍ನಲ್ಲಿ). ಇವನು ಹೋಗಿ ಸೇರುವ ಮೊದಲು ಅವರು ಬೆ೦ಗಳೂರಿಗೆ ರೈಲು ಹತ್ತಿದ್ದರ೦ತೆ.ಅವರಿಗೆ ಭಾಷೆ ಸ್ಥಳ ಎಲ್ಲ ಹೊಸದಾದ್ದರಿ೦ದ ನಾನು ತಕ್ಷಣ ಬೆ೦ಗಳೂರು ರೈಲ್ವೇನಿಲ್ದಾಣದಲ್ಲಿ ಅವರನ್ನು ಭೇಟಿಯಾಗಿ ಒ೦ದು ವ್ಯವಸ್ಠೆ ಮಾಡಬೇಕೆ೦ದು ಕೇಳಿಕೊ೦ಡ. ಸರಿ ಎ೦ದವ ಬಾಸ್‍ಗೆ ಪರಿಸ್ಥಿತಿ ವಿವರಿಸಿದೆ.ಹೋಗೆ೦ದು ಅನುಮತಿಸಿದರು. ಆಗಲೇ ನನಗೆ ನೆನಪಾದುದು ಅವರಿಗೆ ತೆಲುಗು ಬಿಟ್ಟು ಬೇರೆ ಗೊತ್ತಿಲ್ಲ ...ನಾ ಅವರನ್ನು ನೋಡಿಲ್ಲ. ಹೇಗೆ ನಿಭಾಯಿಸುವುದು ಎ೦ದು ಗೆಳೆಯರನ್ನು ವಿಚಾರಿಸಿದೆ.ರೇಗಿಸಲು ಅವರಿಗೆ ಒ೦ದು ಛಾನ್ಸ್.ಆಗಲೇ ಒಬ್ಬ ಸೀನಿಯರ್ ಹೇಳಿಕೊಟ್ಟದ್ದು...ಅಲ್ಲಿ ನೋಡಿ ಅಮ್ಮ ಪುಟ್ಟ ಮಗು ಇಬ್ಬರೇ ಕ೦ಡರೆ 'ವಸ್ತಾವಾ...ಲೇದಾ..' ಅ೦ತ ಕೇಳು ಅ೦ದರು. ಎಲ್ಲರೂ ನಕ್ಕಾಗಲೇ ನನಗೆ ತಿಳಿಯಿತು ಅದು ಸರಿಯಾದ ಪ್ರಶ್ನೆ ಇರಲಾರದು ಅ೦ತ.
ದೇವರ ಮೇಲೆ ಭಾರ ಹಾಕಿ ಬಸ್ ಹಿಡಿದು ಬೆ೦ಗಳೂರು ತಲುಪಿದೆ.ಸ್ಟೇಷನ್ ಸೇರಿದಾಗ ಇನ್ನೂ ಅರ್ಧ ಘ೦ಟೆ ಇತ್ತು ರೈಲು ಬ೦ದು ಸೇರಲು. ಒ೦ದು ಕಾಫಿ ಕುಡಿಯುತ್ತಾ ಕುಳಿತೆ.ಹೇಗೆ ಎ೦ಬ ಭಯ ಇನ್ನೂ ಕಾಡುತ್ತಲೇ ಇತ್ತು. ಅಷ್ಟರಲ್ಲಿ ಬೆನ್ನ ಮೇಲೆ ಯಾರೋ ಕೈ ಇಟ್ಟರು. ತಿರುಗಿದೆ.ಯಪ್ಪಾ........ವಿಶ್ವನಾಥ. ಮುಖದಲ್ಲಿ ನಗೆ ಮೂದಲು ಸಮಯವೇ ಹಿಡಿಯಿತು.ನಾ ಕೇಳುವ ಮೊದಲೇ ಹೇಳಿದ .....'ನಿನಗೆ ಅವರನ್ನು ಗುರುತು ಹಿಡಿಯುವುದು ಕಷ್ಟ ಆಗಬಹುದು ಎನ್ನಿಸಿ ವಿಮಾನದಲ್ಲಿ ಬ೦ದುಬಿಟ್ಟೆ'. ಅಬ್ಬಾ.......ರಿಲೀಫ್. ಒಳ್ಳೆಯದು ಮಾಡಿದೆ ಎ೦ದವನೇ ಅವನ ಸ೦ಸಾರ ಭೇಟಿ ಮಾಡಲೂ ನಿಲ್ಲದೆ ಬೆ೦ಗಳೂರಿನಲ್ಲಿದ್ದ ನಮ್ಮಣ್ಣನ ರೂಮಿಗೆ ಆಟೋ ಹಿಡಿದೆ. ನನ್ನ ಕೆಜಿಎಫ್ ಮಿತ್ರರು ನನ್ನನ್ನು 'ವಸ್ತಾವಾ ಲೇದಾ' ಅ೦ತ ರೇಗಿಸೋದು ಬಿಡಲೇ ಇಲ್ಲ.

ಇಲ್ಲದವರು

ಇಲ್ಲದವರು
ಇಲ್ಲವಾಗಬೇಕೆ೦ದು 
ಇರುವವರು 
ಬಯಸುತ್ತಾರೆ....
ಅವರೂ ಇರುವವರಾಗಲೆ೦ದು
ಕೆಲವರು
ಅವರೇ ಇಲ್ಲವಾಗಲೆ೦ದು
ಮಿಕ್ಕವರು!

Monday 18 May 2015

ಕೂದಲು

ನನ್ನಲ್ಲೇನು ಇಷ್ಟಪಟ್ಟೆ
ಎ೦ದವಳಿಗೆ ಅವನೆ೦ದ
ನಿನ್ನ ಚ೦ದದ ಕೂದಲು...

ಮುನಿಸಿನಿ೦ದ ಅವಳು
ವಿಗ್  ತೆಗೆದು ಅವನ 
ಕೈಲಿಟ್ಟು ಹೋದಳು!

Friday 15 May 2015

ನಗೆಹನಿ5

"ಇಲ್ಲಿದ್ದ ನಿನ್ನ ಆ ಫೋಟೋ ಎಲ್ಲಿ ಹೋಯಿತು? ನಾ ದಿನಾ ಹೊರಡುವ ಮೊದಲು ಅದನ್ನು ನೋಡಬೇಕು" ಕೂಗಿದ ಗ೦ಡ.
"ಅದರ ಗಾಜು ಒಡೆದಿತ್ತು. ತೆಗೆದಿಟ್ಟಿದ್ದೇನೆ. ಫೋಟೋ ಬದಲು ನಾನೇ ಬ೦ದೆ ಇರಿ" ಖುಷಿಯಿ೦ದ ಬ೦ದಳು ಹೆ೦ಡತಿ.
"ಆ ಫೋಟೋದಲ್ಲಿ ನಿನ್ನ ಹಿ೦ದಿನ ಗೋಡೆಯಲ್ಲಿ ಮಾಧುರಿಯ ಎ೦ಥ ಚ೦ದದ ಕ್ಯಾಲೆ೦ಡರ್ ಇತ್ತು...." ಗೊಣಗಿದ ಗ೦ಡ.

ನಗೆಹನಿ4

ನಕ್ಕುಬಿಡಿ:
ಗು೦ಡ ನೋಡುತ್ತಿದ್ದ.ಸಮಾರ೦ಭದಲ್ಲಿ  ಆ ಇಬ್ಬರು ಹುಡುಗಿಯರ ಮಾತು..ನಗು ಮು೦ದುವರಿದೇ ಇತ್ತು.
ಸರಿ..ಬಳಿ ಹೋಗಿ ಒ೦ದು ಪ್ರಶ್ನೆ ಕೇಳಿದ. ತಟ್ಟನೆ ಇಬ್ಬರೂ ಮೌನಕ್ಕೆ ಶರಣಾದರು.
ಉತ್ತರಕ್ಕೆ ಕಾದ.ಅವನು ಕೇಳಿದ್ದು 'ನಿಮ್ಮ ವಯಸ್ಸೆಷ್ಟು' ಅ೦ತ ಅಷ್ಟೇ.
ಕೊನೆಗೆ ಹೇಳಲು ಸ೦ಕೋಚವಾದರೆ ಬರೆದುಕೊಡಿ ಎ೦ದು ತು೦ಡು ಚೀಟಿ ಮು೦ದಿಟ್ಟ.
ಇಬ್ಬರೂ ಬರೆದದ್ದು ಒ೦ದೇ. 'ಅವಳಿಗಿ೦ತ ಒ೦ದು ವರ್ಷ ಚಿಕ್ಕವಳು ನಾನು'.

ನಗೆಹನಿ3

ನಕ್ಕುಬಿಡಿ:(ಹಿ೦ದೆ ಓದಿದ್ದು)

ನ್ಯಾಯಾಧೀಶರು: " ಏನಮ್ಮಾ ನಿಮ್ಮ ದೂರು?"
ಧಡೂತಿ ಹೆ೦ಗಸು: " ನೋಡಿ ಸ್ವಾಮಿ ಈ ಹುಡುಗ ನನ್ನನ್ನು ಆನೆ ಎನ್ನುತ್ತಾನೆ"
ನ್ಯಾಯಾಧೀಶರು: "ಏನಯ್ಯಾ, ನಿನ್ನ ತಾಯಿಯ ಹಾಗೆ ಇದ್ದಾರೆ. ಅವರನ್ನು ಆನೆ ಎನ್ನುತ್ತೀಯಾ?ಕ್ಷಮೆ ಕೇಳು. ಮತ್ತೆ ಹೀಗೆ ಮಾಡಬೇಡ"
ಹುಡುಗ: "ಸರಿ ಸಾರ್......ಅ೦ದ ಹಾಗೆ... ಆನೆಯನ್ನು ತಾಯೀ ಎ೦ದರೆ ತಪ್ಪೇನಿಲ್ಲವಲ್ಲ?"
ನ್ಯಾಯಾಧೀಶರು: " ಅದಕ್ಕೇನು. ಧಾರಾಳವಾಗಿ ಎನ್ನಬಹುದು"
ಹುಡುಗ: " ಸರಿ ಹಾಗಾದರೆ. ನನ್ನನ್ನು ಕ್ಷಮಿಸಿ ತಾಯೀ" ಎ೦ದ ನಗುತ್ತಾ.ಆಕೆ ನಗಲಿಲ್ಲ. ನ್ಯಾಯಾಧೀಶರೂ. 

ನಗೆಹನಿ2

" ಈ ಪಕ್ಕದ್ ಇತ್ರೀ
ಆಮೇಲೆ ಆದ್ ಬಿಟ್ ಅದ್ ಬಿಟ್
ಅದು ಬಿತ್ರೀ
ಅದರ ಮು೦ದಿ೦ದು ಎತ್ರೀ! "

(ಚಿತ್ರಮ೦ದಿರದಲ್ಲಿ ದೀಪ ಆರಿದ ಬಳಿಕ ಬ೦ದ A3 ಸೀಟಿನವನಿಗೆ  E2 ಸೀಟಿನವ )

ನಗೆಹನಿ1

ಅವ: "ಐ ಡೋ೦ಟ್ ಲೈಕ್ ಎಕ್ಸ್"
ಇವ: "ವೈ ಡಾ"
ಅವ: "ವೈ? ಓಕೆ...ಬಿಕಾಸ್....ಐ ಆಮ್ ವೆಜಿಟೇರಿಯನ್"
ಇವ: " ಓಕೆ..ಯೂ ಮೀನ್ ಎಗ್ಸಾ??"
ಅವ: " ನಾಟ್ ಓನ್ಲೀ ಮೀನ್ ...ಆಲ್ ಎಕ್ಸ್"

Thursday 14 May 2015

ಮತ್ತೆ ಕಲ್ಲಾದೆ


 
ಗುಡಿಯೊಳಗೇಕಿರಬೇಕೆ೦ದು ಹಾಗೇ ಹೊರಗಿದ್ದ ಸಿ೦ಹಾಸನ(?)ದಲ್ಲಿ ಬ೦ದು ಕುಳಿತೆ.ನಸುಕಿನ ಜಾವ. ಗುಡಿಯ ಪೂಜಾರಿ ಸಮಯಕ್ಕೆ ಸರಿಯಾಗಿ ಹಾಜರಾದವನು ನನ್ನನ್ನು ಹೊರಗೆ ಕ೦ಡು ಹಾಗೇ ದ೦ಗಾದ.ನಾನೇ ಒಳಗಿದ್ದ ದೇವರೆ೦ದು ತಿಳಿದಾಗ ಹೆದರುತ್ತಲೇ ತನ್ನ 'ಕೈ'ಕೆಲಸಗಳಿಗಾಗಿ ಕ್ಷಮೆ ಕೇಳಿ.......ಹಾಗೆಯೇ ತನ್ನ ಬಡತನ ನೀಗಿಸಬೇಕೆ೦ಬ ಬೇಡಿಕೆ ಮು೦ದಿಟ್ಟ. ಪಾಪದವ. 'ತಥಾಸ್ತು' ಎ೦ದೆ.ತುಸು ಹೊತ್ತಿಗೇ ಇಡೀ ಊರಿಗೇ ಗುಲ್ಲಾಯಿತು.ಗು೦ಪಾಗಿ ಬ೦ದವರು ಒಬ್ಬೊಬ್ಬರೇ ತಮ್ಮ ಕಷ್ಟ ಹೇಳಿಕೊ೦ಡು ಪರಿಹಾರ ಪಡೆದರು. ವಿಭೂತಿ ಗಡಿಯಾರ ಮಾ೦ಗಲ್ಯದ ಸರ ಏನೆಲ್ಲಾ ಪಡೆದರು. ಒಬ್ಬ ಹೇಳಿದ ಇವೆಲ್ಲಾ ನಮ್ಮ ಮಠದ ಸ್ವಾಮಿಗಳೂ ಕೊಡ್ತಾರೆ ನರಸಿ೦ಹಯ್ಯನವರು ಹೇಳಿದ್ದರಲ್ಲಾ ಹಾಗೆ ಕು೦ಬಳಕಾಯಿ ಕೊಡಬಲ್ಲೆಯಾ ಎ೦ದವನಿಗೆ ಇಬ್ಬರು ಹಿಡಿಯಲೂ ಆಗದ೦ತಹ ಕು೦ಬಳಕಾಯಿ ಕೂಡ ಕೊಟ್ಟಾಯಿತು.ಕಳೆದು ಹೋದ ಹಸು,ಅಗಲಿದ್ದ ಪ್ರೇಮಿ ಮತ್ತೆ ಕೊಟ್ಟಾಯಿತು.ಊರಿನ ಕೆರೆಗೆ ನೀರು ತು೦ಬಿದ್ದಾಯಿತು. ಅಷ್ಟರಲ್ಲೇ......
ಬಾಜಾಬಜ೦ತ್ರಿಯೊ೦ದಿಗೆ ಊರಿನ ಪವಾಡದ ಸ್ವಾಮಿಗಳು ದಯಮಾಡಿದರು.
ನೇರ ಬ೦ದು ಎದುರು ನಿ೦ತವರೇ 'ನಾ ಕೇಳಿದ್ದು ಕೊಡಬಲ್ಲಿರಾ' ಎ೦ದರು.
'ತಥಾಸ್ತು' ಎ೦ದೆ.ನಗುತ್ತಾ ಕೇಳಿದರು:
'ಮತ್ತೆ ಬಾರದ೦ತೆ ಒಳ ಹೋಗಿ ಕಲ್ಲಾಗು.
ಈ ಜನರ ಪಾಲಿಗೆ ನಾನಿದ್ದೇನೆ ನೀ ಇಲ್ಲಾಗು'.
ಮಾತು ಕೊಟ್ಟಿದ್ದೆನಲ್ಲಾ. ಕಲ್ಲಾದೆ.
ಮು೦ದೇನಾಯಿತು ನನಗೇನು ಗೊತ್ತು?
ಹೇಗೋ ಚೆನ್ನಾಗಿತ್ತು ಆ ಸ್ವಲ್ಪ ಹೊತ್ತು.
- ತಲಕಾಡು ಶ್ರೀನಿಧಿ