Sunday 28 June 2015

ಮತ್ತೆ ನಾನೇ

ಎಲ್ಲೋ ಕಳೆದುಹೋದೆ-
ನೆ೦ದೆನಿಸಿತು
ಹುಡುಕಿ ಹೊರಟೆ!

ತಲಕಾಡಿನ ಮರಳರಾಶಿಯಲಿ
ಕಾವೇರಿ ತೀರದ ಕಪ್ಪೆಚಿಪ್ಪುಗಳಲಿ
ಅಲ್ಲಿನ ತೊಟ್ಟಿಮನೆಯ
ಜಗುಲಿಯಲಿ...ವಿಶಾಲ
ಹಿತ್ತಲಲಿ!

ಮತ್ತೆ ಮೈಸೂರಿನ ಅಗ್ರಹಾರದಲಿ
ಸಯ್ಯಾಜಿರಾವ್ ರಸ್ತೆಯಲಿ
ಮಾರಿಗುಡಿ ಮೈದಾನದಲಿ
ಯುವರಾಜ ಕಾಲೇಜಿನ ಆಸುಪಾಸಿನಲಿ
ಸೈಕಲ್ ಏರಿ ಸುತ್ತಿದ ಬೀದಿಗಳಲಿ!

ಬೆ೦ಗಳೂರಿಗೆ ಹೋಗಿ ಬ೦ದ ಬಸ್ಸು ರೈಲುಗಳಲಿ
ಸ೦ಜೆಗಳ ಅಡ್ಡಾ ಸ೦ಪಿಗೆ ರಸ್ತೆಯಲಿ
ಒಮ್ಮೊಮ್ಮೆ ಅಲೆದ್ ಬ್ರಿಗೇಡ್ ರಸ್ತೆಯಲಿ
ಮಧ್ಯೆ ಕೆಲದಿನ ಕಳೆದ
ರಾಬರ್ಟ್‍ಸನ್‍ಪೇಟೆಯಲಿ
ವೃತ್ತಿಜೀವನದ ಬೆಮೆಲ್‍ನಲಿ
ಭದ್ರನೆಲೆ ಹಿಡಿದ ರಾಜೇಶ್ವರಿನಗರದಲಿ!

ಈ ಎಲ್ಲ ಕಡೆ ಸಿಕ್ಕ ತುಣುಕುಗಳ
ಒಟ್ಟು ಹಾಕಿ ಕಾವು ಕೊಟ್ಟೆ
ಮತ್ತೆ ನಾನೇ ಆಗಿ ಎದ್ದು ನಿ೦ತೆ
ಮರೆತು ಎಲ್ಲ ಹಳೆಯ ಚಿ೦ತೆ!!

No comments:

Post a Comment